ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಇಂದು (ಮಾ.29) ಸುದ್ದಿಗೋಷ್ಠಿ ನಡೆಸಿ, ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸಿದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ, ಚುನಾವಣಾ ಪೂರ್ವ ತಯಾರಿ ಹಾಗೂ ನೀತಿ ಸಂಹಿತೆಯ ಎಚ್ಚರಿಕೆ ಸೇರಿದಂತೆ ಅನೇಕ ಮಾಹಿತಿಗಳನ್ನು ತಿಳಿಸಿದೆ.
ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನವು ಮೇ 10ರಂದು ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಏಪ್ರಿಲ್ 13ಕ್ಕೆ ಅಧಿಸೂಚನೆ ಪ್ರಕಟವಾಗಲಿದೆ.
ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಮನೋಜ್ ಕುಮಾರ್ ಮೀನಾ ಅವರು ಮಾತನಾಡಿ, ಈ ಕ್ಷಣದಿಂದ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 2.63 ಕೋಟಿ ಪುರುಷ ಮತದಾರರು ಹಾಗೂ 2.60 ಮಹಿಳಾ ಮತದಾರರು ಇದ್ದಾರೆ. 6,77,247 ಲಕ್ಷ ಮತದಾರರನ್ನು ಹೊಂದಿರುವ ಬೆಂಗಳೂರು ದಕ್ಷಿಣ ಕ್ಷೇತ್ರ ಹೆಚ್ಚು ಮತದಾರರಿರುವ ವಿಧಾನಸಭಾ ಕ್ಷೇತ್ರವಾಗಿದೆ. 1,68,562 ಲಕ್ಷ ಮತದಾರರನ್ನು ಹೊಂದುವ ಮೂಲಕ ಶೃಂಗೇರಿ ವಿಧಾಸಭಾ ಕ್ಷೇತ್ರ ಕಡಿಮೆ ಮತದಾರರಿರುವ ವಿಧಾನಸಭಾ ಕ್ಷೇತ್ರ ಎನಿಸಿಕೊಂಡಿದೆ.
ಚುನಾವಣೆಗಾಗಿ ಹೊಸ ಯಂತ್ರ ಬರುತ್ತಿದ್ದು, ಇದೇ ಮೊದಲ ಬಾರಿ ಉಪಯೋಗಿಸಲಾಗುತ್ತಿದೆ. M3 ಇವಿಎಮ್ ಯಂತ್ರವನ್ನು ಬಳಸಲಿದ್ದೇವೆ. ಎಲ್ಲ ರಾಜಕೀಯ ಪಕ್ಷಗಳ ಜತೆ ಹೊಸ ಯಂತ್ರವನ್ನು ಪರಿಶೀಲಿಸುತ್ತೇವೆ ಎಂದು ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದರು.
ರಾಜ್ಯದ ಗಡಿಯಲ್ಲಿ 171 ಇಂಟರ್ ಸ್ಟೇಟ್ ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಈವರೆಗೂ ನಮ್ಮ ಇಲಾಖೆಯಿಂದ 53 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಸೀಜ್ ಮಾಡಿದ್ದೇವೆ. ಪೊಲೀಸ್ ಇಲಾಖೆಯಿಂದ 34 ಕೋಟಿ ರೂ., ಅಬಕಾರಿ ಇಲಾಖೆಯಿಂದ 10 ಕೋಟಿ ರೂ. ಮತ್ತು ಆದಾಯ ತೆರಿಗೆ ಇಲಾಖೆಯಿಂದ 1 ಕೋಟಿ ರೂ. ಸೀಜ್ ಮಾಡಲಾಗಿದೆ.
ಚುನಾವಣೆ ಸಂಧರ್ಭದಲ್ಲಿ ಯಾರ ಆಮಿಷಕ್ಕೂ ಜನರು ಒಳಗಾಗಬಾರದು. ಅಂತಹ ಆಮಿಷ ಒಡ್ಡಿದ್ದರೆ ಆ ಬಗ್ಗೆ ದೂರು ನೀಡಬೇಕು. ಬೇಕಾದರೆ, ಚುನಾವಣಾ ಆಯೋಗದ ವೆಬ್ಸೈಟ್ ಮೂಲಕವು ದೂರು ನೀಡಬಹುದು. ಈ ಬಾರಿ ಮತದಾನ ಪ್ರಮಾಣವನ್ನು ಜಾಸ್ತಿ ಮಾಡಬೇಕು ಮತ್ತು ಹಣ ಹಂಚಿಕೆಯನ್ನು ತಡೆಗಟ್ಟುವುದಕ್ಕೆ ಜನರು ಸಹಕಾರ ನೀಡಬೇಕೆಂದು ಮನೋಜ್ ಕುಮಾರ್ ಮೀನಾ ಅವರು ಮನವಿ ಮಾಡಿದರು.