ಬೆಳಗಾವಿ: ಚುನಾವಣೆ (Election) ಸಮೀಪಿಸುತ್ತಿದ್ದಂತೆ ಸಮುದಾಯದವರ ಮತ ಸೆಳೆಯಲು ಶಾಸಕರು ಕಸರತ್ತು ನಡೆಸುತ್ತಿದ್ದಾರೆ. ಬೆಳಗಾವಿ (Belagavi) ಉತ್ತರ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತ ಸೆಳೆಯಲು ಶಾಸಕ ಅನಿಲ್ ಬೆನಕೆ (Anil Benake) ನಾನಾ ಕಸರತ್ತು ನಡೆಸಿದ್ದು, ಉತ್ತರ ಮತಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಆಗಿವೆ. ಹೀಗಾಗಿ ಉತ್ತರ ಕ್ಷೇತ್ರದಲ್ಲಿ ಅನುಭವ ಮಂಟಪ (Anubhava Mantapa) ನಿರ್ಮಾಣಕ್ಕೆ ಶಾಸಕ ಅನಿಲ ಬೆನಕೆ ಮುಂದಾಗಿದ್ದಾರೆ.
ಬೆಳಗಾವಿಯ ಮಾಳಮಾರುತಿ ಬಡಾವಣೆಯಲ್ಲಿ ನಿರ್ಮಾಣವಾಗಲಿರುವ ಅನುಭವ ಮಂಟಪ ಅಡಿಗಲ್ಲು ಕಾರ್ಯಕ್ರಮಕ್ಕೆ ಬಿ.ಎಸ್.ಯಡಿಯೂರಪ್ಪನವರನ್ನು (B.S.Yediyurappa) ಕರೆಸಲಾಗುತ್ತಿದೆ. ಅನುಭವ ಮಂಟಪ ಅಡಿಗಲ್ಲು ಕಾರ್ಯಕ್ರಮಕ್ಕೆ ಅನಿಲ್ ಬೆನಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಅನುಭವ ಮಂಟಪದಲ್ಲಿ ಬಸವಾದಿ ಶರಣರ ಚರಿತ್ರೆ ಸಾರುವ ಸಂದೇಶಗಳು, ಜಗಜ್ಯೋತಿ ಬಸವೇಶ್ವರ ಪ್ರತಿಮೆ, ಬಸವಾದಿ ಶರಣರ ಉಬ್ಬುಚಿತ್ರ ಸೇರಿ ಹಲವು ವಿಶೇಷತೆಗಳು ಇರಲಿವೆ. ಶಾಸಕ ಅನಿಲ ಬೆನಕೆ ಪೂರ್ವಭಾವಿ ಸಭೆಯನ್ನು ಕರೆದಿದ್ದು, ಅನುಭವ ಮಂಟಪ ನಿರ್ಮಾಣದ ಕುರಿತು ಲಿಂಗಾಯತ ಸಮುದಾಯದ ಮುಖಂಡರ ಜೊತೆ, ಸಂಶೋಧಕರು, ಪರಿಣಿತರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ.
ಅನುಭವ ಮಂಟಪಕ್ಕಾಗಿ ಮಾಳಮಾರುತಿ ಬಡಾವಣೆಯಲ್ಲಿ ಈಗಾಗಲೇ ಕಟ್ಟಡ ನಿರ್ಮಾಣವಾಗುತ್ತಿದ್ದು ಮಂಟಪದ ಒಳಾಂಗಣ ಕಾಮಗಾರಿಗೆ ಚಾಲನೆ ನೀಡಲು ಸಿದ್ಧತೆ ನಡೆಸಲಾಗಿದೆ. ನೀತಿ ಸಂಹಿತೆ ಜಾರಿಗೂ ಮುನ್ನವೇ ಬಿಎಸ್ವೈ ಅವರಿಂದ ಅನುಭವ ಮಂಟಪ ಸ್ಥಾಪನೆಗೆ ಅಡಿಗಲ್ಲು ಕಾರ್ಯಕ್ರಮಕ್ಕೆ ಅನಿಲ ಬೆನಕೆ ಸಿದ್ಧತೆ ನಡೆಸಿದ್ದಾರೆ.