ದಾವಣಗೆರೆ: ಕರ್ನಾಟಕದಲ್ಲಿ ಯಾವ ಸರ್ಕಾರ ಇದೆಯೆಂದು ದೇಶದಲ್ಲಿ ಕೇಳಿದರೆ 40 ಪರ್ಸೆಂಟ್ ಸರ್ಕಾರ ಎನ್ನುತ್ತಾರೆ. ಬಸವರಾಜ ಬೊಮ್ಮಾಯಿ ಯಾರು ಎಂದು ಕೇಳಿದ್ರೆ ಪೇ ಸಿಎಂ ಎನ್ನುತ್ತಾರೆಂದು ದಾವಣಗೆರೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ 8 ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆದರೆ ಎಲ್ಲಿಯೂ 40 ಪರ್ಸೆಂಟ್ ಅರೋಪದ ಬಗ್ಗೆ ಉತ್ತರಿಸಿಲ್ಲ. ಬಿಜೆಪಿ ಕಾರ್ಯಕರ್ತರೇ ಆಗಿದ್ದ ಮೃತ ಸಂತೋಷ ಪಾಟೀಲ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಡಿಕೆಶಿ, ಸಿದ್ದರಾಮಯ್ಯ, ನಾನು ಬೆಳಗಾವಿಯ ಸಂತೋಷ್ ಪಾಟೀಲ್ ಮನೆಗೆ ಭೇಟಿ ನೀಡಿದ್ದೇವೆ. ನನ್ನ ಪತಿ ಬಿಜೆಪಿಗಾಗಿ ಜೀವನವನ್ನೇ ಸವಿಸಿದರು, ಬಿಜೆಪಿ ನಮ್ಮ ಕಡೆ ತಿರುಗಿ ನೋಡಲಿಲ್ಲ ಎಂದು ಸಂತೋಷ ಪತ್ನಿ ಆಪಾದಿಸಿದ್ದಾರೆ ಎಂದು ಹೇಳಿದ್ದಾರೆ.
ಲಿಂಗಾಯತ ಸಮುದಾಯದ ದಿಂಗಾಲೇಶ್ವರ ಶ್ರೀಗಳೆ ಹೇಳಿದ್ದಾರೆ ಮಠಕ್ಕೆ ಅನುದಾನ ನೀಡಲು ನನ್ನ ಬಳಿ 30% ಕೇಳಿದ್ರು ಅಂತ. ಅವರ ಪಕ್ಷದವರೇ ಸಾಕಷ್ಟು ಬಾರಿ ಕಮಿಷನ್ ಕುರಿತು ಹೇಳಿದ್ದಾರೆ. ಸಿಎಂ ಕುರ್ಚಿಯನ್ನು 2050 ಕೋಟಿ ರೂಪಾಯಿಗೆ ಮಾರಾಟಕ್ಕೆ ಇಟ್ಟಿದ್ದಾರೆ. ಈ ಕುರಿತು ಸ್ವತಃ ಬಿಜೆಪಿಯ ಯತ್ನಾಳ್ ಬಹಿರಂಗವಾಗಿ ಹೇಳಿದ್ದಾರೆ. ಸಿಎಂ ಬೊಮ್ಮಾಯಿ, ಎಷ್ಟು ಕೊಟ್ಟು ಸಿಎಂ ಆಗಿದ್ದಿರಿ ಅಂತ ಹೇಳಿ? ಎಂದು ಬೊಮ್ಮಾಯಿಗೆ ಸುರ್ಜೇವಾಲಾ ಪ್ರಶ್ನೆ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಬಿಜೆಪಿ ಶಾಸಕನ ಪುತ್ರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಕೈಗೆ ಸಿಕ್ಕು ಬಿದ್ದನು. ಶಾಸಕ ನಾಪತ್ತೆಯಾಗಿ ನಾಲ್ಕು ದಿನವಾಗಿದೆ. ಆತನನ್ನ ಹುಡುಕಲು ಸರ್ಕಾರದಿಂದ ಆಗಿಲ್ಲ. ಲುಕ್ ಔಟ್ ನೋಟಿಸ್ ಇದ್ದರೂ ನಿಮ್ಮದೇ ಶಾಸಕನನ್ನು ನಿಮ್ಮ ಕೈಯಲ್ಲಿ ಹಿಡಿಯಲು ಸಾಧ್ಯವಾಗುತ್ತಿಲ್ಲ. ಇನ್ನು ಅಪರಾಧಿಗಳನ್ನ, ಗೂಂಡಾಗಳನ್ನ ಹಿಡಿಯಲು ಸಾಧ್ಯವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.