ಬೈಲಹೊಂಗಲ: ಬೆಳವಡಿ ಸಂಸ್ಥಾನಗಳ ಇತಿಹಾಸ ಕುರಿತು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಇತಿಹಾಸಗಾರರು ಹಾಗೂ ಸರ್ಕಾರ ಬೆಳವಡಿ ಸಂಸ್ಥಾನದ ಸಮಗ್ರ ಇತಿಹಾಸ ಅಧ್ಯಯನ ಮಾಡಿ ಬೆಳವಡಿ ಮಲ್ಲಮ್ಮಳ ಕುರಿತ ಕುರುಹುಗಳ ಸಂರಕ್ಷಣೆಗೆ ಒತ್ತು ನೀಡಬೇಕಿದೆ ಎಂದು ಬೆಳಗಾವಿ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ನಿರ್ಮಲಾ ಭಟ್ಟಲ ಹೇಳಿದರು.
ಮಲ್ಲಮ್ಮನ ಬೆಳವಡಿ ಗ್ರಾಮದ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಳವಡಿ ಮಲ್ಲಮ್ಮ ಉತ್ಸವದ ಎರಡನೇ ದಿನ ಬುಧವಾರ ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಇಡೀ ಸ್ತ್ರೀ ಕುಲಕ್ಕೆ ಸ್ಫೂರ್ತಿ, ಮಾದರಿ ವ್ಯಕ್ತಿತ್ವ ರೂಪಿಸಿಕೊಂಡು ಪ್ರಜೆಗಳ, ನಾಡ ರಕ್ಷಣೆಗೆ ರಾಣಿ ಮಲ್ಲಮ್ಮ ತೋರಿದ ಸಾಹಸ ಸ್ಮರಣೀಯವಾಗಿದೆ. ಛತ್ರಿಪತಿ ಶಿವಾಜಿ ಮಹರಾಜರ ಸೆ„ನ್ಯದೊಂದಿಗೆ ಹೋರಾಡಿ ಸಹೋದರತ್ವ ಪಡೆದ ವೀರವನಿತೆ ಬೆಳವಡಿ ಮಲ್ಲಮ್ಮ ಎಲ್ಲರ ಹೆಮ್ಮೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಅಧ್ಯಕ್ಷ ಎನ್.ಆರ್.ಠಕ್ಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯರಗಟ್ಟಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಾ| ಬಾಳೇಶ ಚಿನಗುಡಿ ಬೆಳವಡಿ ಮಲ್ಲಮ್ಮನ ಸಂಸ್ಥಾನ, ವಂಶಸ್ಥರ ದೇಸಗತಿಗಳ ಕುರಿತು ವಿವರಿಸಿದರು. ಶಿಗ್ಗಾಂವ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶಾಂತಾ ಮರಿಗೌಡರ ಭಾರತೀಯ ಸಂಸ್ಕೃತಿಗೆ ಮಲ್ಲಮ್ಮನ ಕೊಡುಗೆ ತಿಳಿಸಿದರು.ಸಂಪನ್ಮೂಲ ವ್ಯಕ್ತಿ ತಾರಾ ಬಿ.ಎನ್. ಮಾತನಾಡಿದರು. ವಕೀಲ ಸಿ.ಎಸ್. ಚಿಕ್ಕನಗೌಡ ಆಶಯ ನುಡಿ ಮಂಡಿಸಿದರು.
ಬಿಇಒ ಎ.ಎನ್.ಪ್ಯಾಟಿ ಸ್ವಾಗತಿಸಿದರು. ಶಿಕ್ಷಕ ಶಿವಪ್ಪ ಹುಂಬಿ ನಿರೂಪಿಸಿದರು. ವಕೀಲ ಎಫ್ .ಎ.ನದಾಫ ವಂದಿಸಿದರು. ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ತಹಶೀಲ್ದಾರ್ ಜೆ.ಸಿ.ಅಷ್ಟಗಿಮಠ, ರಾಜು ಹಕ್ಕಿ, ಅನೇಕರು ಇದ್ದರು.