ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರದ ಗುಜರಿ ಉಪಕರಣಗಳಿಗೆ ಭಾನುವಾರ ಬೆಂಕಿ ತಗುಲಿದ್ದು, ಹಲವು ವಸ್ತುಗಳು ಬೆಂಕಿಯಲ್ಲಿ ಸುಟ್ಟು ಹೋದವು. ಅಗ್ನಿ ಶಾಮಕ ದಳ ಸಿಬ್ಬಂದಿ ಮೂರ್ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಬಸ್ ಆಸನಕ್ಕೆ ಬಳಸಿ ಹಾಳಾದ ಸೀಟ್ ಕವರ್ಗಳು ಹಾಗೂ ರೆಗ್ಝಿನ್ ಅನ್ನು ಕಾರ್ಯಗಾರದ ಹಿಂಭಾಗದಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಸೀಟ್ ಕವರ್ಗಳು ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಹತ್ತಾರು ವರ್ಷಗಳಿಂದ ಅಲ್ಲಿಯೇ ಸಂಗ್ರಹಿಸಲಾಗುತ್ತಿತ್ತು. ಸಂಜೆ 6.30ರ ವೇಳೆ ಶಾರ್ಟ್ ಸರ್ಕಿಟ್ನಿಂದ ಟ್ರಾನ್ಸ್ಫಾರ್ಮ್ನಲ್ಲಿ ಬೆಂಕಿ ಕಾಣಿಸಿಕೊಂಡು, ಗುಜರಿಗೆ ಬೆಂಕಿ ತಗುಲಿದೆ.
ಬಾನೆತ್ತರಕ್ಕೆ ವ್ಯಾಪಿಸಿದ ಬೆಂಕಿ ಜ್ವಾಲೆಯನ್ನು ಎರಡು ಅಗ್ನಿ ಶಾಮಕ ದಳ ವಾಹನಗಳಿಂದ ನಂದಿಸುವ ಕಾರ್ಯ ನಡೆಯಿತಾದರೂ, ಬೆಂಕಿ ಮಾತ್ರ ಆರಲಿಲ್ಲ. ಮತ್ತೆರಡು ವಾಹನಗಳು ಕಾರ್ಯಾಚರಣೆಯಲ್ಲಿ ಭಾಗಿಯಾದವು. ಕಾರ್ಯಾಗಾರದ ಇತರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಬೆಂಕಿಯ ತೀವ್ರತೆಗೆ ಭಯಗೊಂಡು ಹೊರಗಡೆ ಓಡಿ ಬಂದಿದ್ದರು.
‘ಶಾರ್ಟ್ ಸರ್ಕಿಟ್ನಿಂದ ಟ್ರಾನ್ಸ್ಫಾರ್ಮ್ನಲ್ಲಿ ಬೆಂಕಿ ಕಾಣಿಸಿಕೊಂಡು, ನಂತರ ಗುಜರಿ ವಸ್ತುಗಳಿಗೆ ತಗುಲಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಂಸ್ಥೆಗೆ ಸಂಬಂಧಿಸಿದ ಉಪಕರಣಗಳು ಬೆಂಕಿಗೆ ಆಹುತಿಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ, ವ್ಯವಸ್ಥಾಪಕ ನಿರ್ದೇಶಕರು ತನಿಖೆಗೆ ಆದೇಶಿಸಿದ್ದಾರೆ’ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.