ಬೆಂಗಳೂರು: 15ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನವಾದ ವಿಧಾನಸಭೆಯಲ್ಲಿ ವಿದಾಯ ಭಾಷಣದ್ದೇ ಕಾರುಬಾರು.
ಕಳೆದ 5 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ, ಜನತೆಯ ಹಿತಕ್ಕಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡು ತನುಮನದಿಂದ ದುಡಿದ ಸಂತೃಪ್ತ, ಸಾರ್ಥಕ ಭಾವನೆಯನ್ನು ಎಲ್ಲ ಸದಸ್ಯರುಗಳು ವ್ಯಕ್ತಪಡಿಸಿ, ಪರಸ್ಪರ ಶುಭಾಶಯ,, ಅಭಿನಂದನೆಗಳ ವಿನಿಮಯ ಮಾಡಿಕೊಂಡರು.
ಜತೆಗೆ ಮತ್ತೆ ಚುನಾವಣೆಯಲ್ಲಿ ಗೆದ್ದು ಸದನಕ್ಕೆ ಬರೋಣ ಶುಭ ಹಾರೈಕೆಗಳ ವಿನಿಮುಂವೂ ಸದನದಲ್ಲಿ ಆಯಿತು. 2018ರ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಅವಧಿ ಇದೇ 2023ರ ಮೇ ತಿಂಗಳಿಗೆ ಅಂತ್ಯವಾಗಲಿದೆ. ಐದು ವರ್ಷಗಳಲ್ಲಿ 167 ದಿನಗಳು ಅಧಿವೇಶನ ನಡೆದಿದೆ.
ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 15ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಸದಸ್ಯರುಗಳೆಲ್ಲರೂ ತಮ್ಮ ಕರ್ತವ್ಯ ಹಾಗೂ ಸದನದ ಕಲಾಪಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡು ರಾಜ್ಯದ ಹಿತಕ್ಕಾಗಿ ತಾವು ಕೆಲಸ ಮಾಡಿದ ರೀತಿ, ವೈಖರಿಗಳನ್ನು ಹೇಳಿಕೊಳ್ಳಲು ಅನುವು ಮಾಡಿಕೊಟ್ಟರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕಾನೂನು ಸಚಿವ ಮಾಧುಸ್ವಾಮಿ, ಕಾಂಗ್ರೆಸ್ನ ಯು.ಟಿ.ಖಾದರ್, ಜಾತ್ಯತೀತ ಜನತಾದಳ ಬಂಡೆಪ್ಪ ಕಾಶಂಪೂರ್ ಸೇರಿದಂತೆ ಶುಕ್ರವಾರ ಸದನದಲ್ಲಿ ಹಾಜರಿದ್ದ ಬಹುತೇಕ ಸದಸ್ಯರುಗಳು ತಾವು ಮಾಡಿದ ಕೆಲಸ, ಸದನದಲ್ಲಿ ಜನ ಹಿತಕ್ಕಾಗಿ ಕೈಗೊಂಡ ತೀರ್ಮಾನ, ಹೋರಾಟ ಎಲ್ಲವನ್ನೂ ಮೆಲುಕು ಹಾಕಿದರು.
ವಿದಾಯ ಭಾಷಣ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 15ನೇ ವಿಧಾನಸಭೆ 5 ವರ್ಷದ ಕಾಲಘಟ್ಟ. 2-3 ವಿಚಾರಗಳು ನಮ್ಮನ್ನು ಗಟ್ಟಿಗೊಳಿಸುತ್ತಾ ಹೋಯಿತು. ಪ್ರಜಾಪ್ರಭುತ್ವದಲ್ಲಿ ಅವಕಾಶಗಳನ್ನು ಯಾವ ರೀತಿ ಬಳಕೆ ಮಾಡಬೇಕು, ಸ್ಪಷ್ಟ ಬಹುಮತ ಬಾರದೆ ವಿರೋಧಾಭಾಸ ಪಕ್ಷಗಳು ಒಂದುಗೂಡಿ ಅಧಿಕಾರ ನಡೆಸುವಂತದ್ದು ಎಲ್ಲವನ್ನು ನೋಡಿದ್ದೇವೆ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹಿರಿತನ, ಅನುಭವ, ಸದನದ ವಿವಿಧ ಸದಸ್ಯರುಗಳ ಕೆಲಸ ಎಲ್ಲವನ್ನೂ ಸ್ಮರಿಸಿದ ಮುಖ್ಯಮಂತ್ರಿಗಳು ಮತ್ತೆ ಎಲ್ಲರೂ ಗೆದ್ದು ಬರೋಣ ಎಲ್ಲರಿಗೂ ಶುಭಾಶಯ ಎಂದು ಹೇಳಿ ಮಾತು ಮುಗಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ವಿದಾಯ ಭಾಷಣವನ್ನು ಮೊದಲು ಆರಂಭಿಸಿದ ಮಾಧುಸ್ವಾಮಿ ಅವರು, 15ನೇ ಅಧಿವೇಶನದ ಅಂತಿಮ ಕ್ಷಣದಲ್ಲಿ ನಾವು ನಿಂತಿದ್ದೇವೆ. ಈ ಮನೆಗೆ ಬರಲು ದೊಡ್ಡ ಹೋರಾಟ ಮಾಡಿ ಗರ್ಭಗುಡಿಯಲ್ಲಿ ನಾವೆಲ್ಲ ಇದ್ದೇವೆ. ಇಲ್ಲಿ ಏನೇ ಮಾಡಿದ್ದರೂ ಅದು ಜನರ ಹಿತಾಸಕ್ತಿ ಹಾಗೂ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಕರ್ತವ್ಯಗಳನ್ನು ಮಾಡಿದ್ದೇವೆ ಎಂದರು.