ಬೆಂಗಳೂರು: ರಾಜಕೀಯ ಪಕ್ಷದ ಅಥವಾ ಸಂಘಟನೆಯೊಂದರಲ್ಲಿ ಮುಖಂಡ, ಕಾರ್ಯಕರ್ತನಾಗಿ ನನ್ನ ಮಗ ಸಾವನ್ನಪ್ಪಿದ್ದರೆ ಇಷ್ಟರಲ್ಲಿ ಪರಿಹಾರ ಸಿಗುತ್ತಿತ್ತು. ಸಬ್ಇನ್ಸ್ಪೆಕ್ಟರ್ ಆಗಿದ್ದರ ಕಾರಣ ಇಂದು ಪುತ್ರನೂ ಇಲ್ಲ. ಪರಿಹಾರವೂ ಇಲ್ಲದಂತೆ ಆಗಿದೆ…
ಇದು 2022ರ ಜೂ.7ರಂದು ಡ್ರಗ್ಸ್ ಪೆಡ್ಲರ್ಗಳ ಬಂಧನ ಕಾರ್ಯಾಚರಣೆ ವೇಳೆ ಆಂಧ್ರಪ್ರದೇಶದ ಚಿತ್ತೂರು ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಿವಾಜಿನಗರ ಠಾಣೆ ಎಸ್ಐ ಅವಿನಾಶ್ ಅವರ ತಂದೆ ಕಾಶಿನಾಥ್ ನೋವಿನ ಮಾತುಗಳು.
40 ವರ್ಷ ಪೊಲೀಸ್ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಕಾಶಿನಾಥ್, ಅನ್ನ ಕೊಟ್ಟ ಇಲಾಖೆ ಮೇಲಿನ ಗೌರವಕ್ಕೆ ತಮ್ಮ ಮಗನಿಗೂ ಸ್ಪೂರ್ತಿ ನೀಡಿ ಎಸ್ಐ ಮಾಡಿಸಿದರು. ತರಬೇತಿ ಮುಗಿಸಿ ಸೇವೆಗೆ ಹಾಜರಾದ ಕೆಲವೇ ತಿಂಗಳಿಗೆ ರಸ್ತೆ ಅಪಘಾತದಲ್ಲಿ ಅವಿನಾಶ್ ಮೃತಪಟ್ಟರು.
ಘಟನೆ ಕುರಿತು ಅಂದು ಮಾತನಾಡಿದ್ದ ಸಿಎಂ ಬೊಮ್ಮಾಯಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ, ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಆದರೆ, 7 ತಿಂಗಳು ಕಳೆದರೂ ಮೃತರ ಕುಟುಂಬಕ್ಕೆ ಬಿಡಿಗಾಸು ಸಿಕ್ಕಿಲ್ಲ. ಪರಿಹಾರ ಕೊಡಿಸುವಲ್ಲಿ ಹಿರಿಯ ಅಧಿಕಾರಿಗಳು ಸಹ ನಿರ್ಲಕ್ಷ್ಯ ವಹಿಸಿರುವುದು ಪೊಲೀಸರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಆರೇಳು ತಿಂಗಳಿಂದ ಎಲ್ಲ ಕಚೇರಿಗಳಿಗೆ ಸುತ್ತಾಡಿ ಅವರು ಕೇಳಿದ ದಾಖಲೆ ಪತ್ರ ಒದಗಿಸಿದೆ. ಇಂದಿಗೂ ಪರಿಹಾರ ಕೊಡುವ ಭರವಸೆಗಳು ಮಾತ್ರ ದೊರೆತಿವೆ. ಪರಿಹಾರ ಮಾತ್ರ ಲಭಿಸಿಲ್ಲ ಎಂದು ಕಾಶಿನಾಥ್, ‘ವಿಜಯವಾಣಿ’ ಜತೆಗೆ ಅಳಲು ತೋಡಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ವೇತನದಲ್ಲಿ ಕಡಿತ ಮಾಡಿ 20 ಲಕ್ಷ ರೂ. ವಿಮಾ ಪಾಲಿಸಿ ಮಾಡಿಸಲಾಗಿದೆ. ಮುಷ್ಕರ, ಪ್ರತಿಭಟನೆ, ಕೋಮು ಗಲಭೆ, ಕರ್ಫ್ಯೂ, ಬಾಂಬ್ ಸ್ಫೋಟ ಮತ್ತು ಅಪರಾಧ ಪ್ರಕರಣಗಳ ತಡೆಗಟ್ಟುವ ಸಮಯದಲ್ಲಿ ಹುತಾತ್ಮರಾದವರಿಗೆ ‘ಅನುಗ್ರಹ ಪೂರ್ವಕ ಪರಿಹಾರ’ ಎಂದು 30 ಲಕ್ಷ ರೂ. ನೀಡುವುದಾಗಿ 2018ರ ಅಕ್ಟೋಬರ್ನಲ್ಲಿ ಸರ್ಕಾರ ಆದೇಶಿಸಿದೆ. ಆದರೆ, ಅವಿನಾಶ್ ಮತ್ತು ಅನಿಲ್ ಮುಲಿಕ್ಗೆ ನಯಾಪೈಸೆ ಸಿಕ್ಕಿಲ್ಲ.