Breaking News
Home / ಹುಬ್ಬಳ್ಳಿ / ಧಾರವಾಡದ ಕಸೂತಿ ಕಲೆಯ ಸೀರೆಯುಟ್ಟು ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್

ಧಾರವಾಡದ ಕಸೂತಿ ಕಲೆಯ ಸೀರೆಯುಟ್ಟು ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್

Spread the love

ಧಾರವಾಡ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡನೆ ಮಾಡುತ್ತಿದ್ದು ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮರೂನ್ ಕಲರ್) ಬಣ್ಣದ ಸೀರೆಯುಟ್ಟಿರುವುದು ವಿಶೇಷ.

ಈ ಸೀರೆಗೆ ಕಸೂತಿ ಹಾಕಿ ವಿಶೇಷವಾಗಿ ರೂಪಿಸಿದ್ದು ಧಾರವಾಡ ನಗರದ ನಾರಾಯಣಪುರದಲ್ಲಿ ಇರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್ ನ ಮಹಿಳಾಮಣಿಗಳು ಅನ್ನುವುದು ಇನ್ನೂ ವಿಶೇಷ.

 

ಜಿಲ್ಲೆಯ ಸಂಸದರು, ಕೇಂದ್ರ ಸಚಿವರು ಆಗಿರುವ ಪ್ರಲ್ಹಾದ ಜೋಶಿ ಅವರು ನವಲಗುಂದ ಕಸೂತಿ ಕಲೆ ಬಗ್ಗೆ, ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮ ಒಂದರಲ್ಲಿ ವಿವರಿಸಿ, ಈ ಸೀರೆಗಳನ್ನು ಜಿಲ್ಲೆಯ ಉಡುಗೊರೆಯಾಗಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಸೈಯದ್ ನಯೀಮ್ ಅಹ್ಮದ ಮೂಲಕ ಕಸೂತಿ ಪರಿಣಿತರನ್ನು ಗುರುತಿಸಿ, ಕಸೂತಿ ಸೀರೆ ತಯಾರಿಗೆ ಸೂಚಿಸಿದ್ದರು.

ಆರತಿ ಕ್ರಾಪ್ಟ್ಸ್: ಆರತಿ ಕ್ರಾಪ್ಟ್ಸ್ ಮಾಲೀಕರಾದ ಆರತಿ ಹಿರೇಮಠ ಅವರು ಸಂತಸದಿಂದ ಕಸೂತಿ ಕಾರ್ಯ ಆರಂಭಿಸಿದ್ದರು. ಕಳೆದ 32 ವರ್ಷಗಳಿಂದ ಕಸೂತಿ ಕ್ಷೇತ್ರದಲ್ಲಿ ತೊಡಗಿ ಕೊಂಡಿರುವ ಆರತಿ ಅವರು, ಸುಮಾರು 210 ಮಂದಿ ಮಹಿಳೆಯರ ತಂಡ ಕಟ್ಟಿ, ಅವರಿಗೆ ಅಗತ್ಯವಿರುವ ಕಸೂತಿ ತರಬೇತಿ ನೀಡಿ, ಸ್ವಯಂ ಉದ್ಯೋಗ ನೀಡಿದ್ದಾರೆ.

ಗ್ರಾಹಕರಿಂದ ಕಸೂತಿ ಸಾರಿ, ಶಲ್ಯೆ, ಉಡುಗೆಗಳ ಬೇಡಿಕೆ ಪಡೆಯುವ ಆರತಿ ಹಿರೇಮಠ ಅವರು ಕಸೂತಿ ಮಾಡುವ ತಮ್ಮ ಮಹಿಳಾ ಸಿಬ್ಬಂದಿ ಮನೆಗೆ ತೆರಳಿ, ಪರಿಕರ ಪೂರೈಸುತ್ತಾರೆ ಮತ್ತು ಸಿದ್ದವಾದ ವಸ್ತುಗಳನ್ನು ತಾವೇ ಕಲೆಕ್ಟ್ ಮಾಡುತ್ತಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರ ಆಸಕ್ತಿಯ ಬೇಡಿಕೆಯಂತೆ ಸೀರೆಗಳನ್ನು ಕಳುಹಿಸಲಾಗಿದ್ದು, ಅದರಲ್ಲಿ ಇಂದು ಅವರು ತೊಟ್ಟಿರುವ ಕೆಂಪು (ಮರೂನ್) ಬಣ್ಣದ ಸೀರೆಯು ಸೇರಿದೆ.

ಸೀರೆ ವಿಶೇಷತೆ: ಕೈಮಗ್ಗದಲ್ಲಿ ನೇಯ್ದ ಇಳಕಲ್ಲ ರೇಷ್ಮೆ ಸೀರೆಗಳಿಗೆ ಸಾಂಪ್ರದಾಯಿಕ ಧಾರವಾಡ ಕಸೂತಿ ಹಾಕಲಾಗಿದೆ. ಐದೂವರೆ ಮೀಟರ್ ಉದ್ದದ ಇಳಕಲ್ಲ ಸೀರೆಗೆ ಚಿಕ್ಕಪರಾಸ್ ದಡಿಯಿದ್ದು, ತೇರು, ಗೋಪುರ, ನವಿಲು, ಕಮಲದ ಚಿತ್ರಗಳ ಕಸೂತಿ ಹಾಕಲಾಗಿದೆ.

ಕೈಮಗ್ಗ ಉದ್ಯಮಕ್ಕೆ ಪ್ರೋತ್ಸಾಹಿಸುವ ಮತ್ತು ಸ್ವಯಂ ಉದ್ಯೋಗನಿರತ ಮಹಿಳೆಯರನ್ನು ಬೆನ್ನು ತಟ್ಟುವ ಕೇಂದ್ರ ಸಚಿವರ ಈ ಕ್ರಮ ನಮಗೆ ಸಂತಸ ಮತ್ತು ಹೆಮ್ಮೆ ಮೂಡಿಸಿದೆ.

ಕೇಂದ್ರ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಇಡೀ ದೇಶ, ಜಗತ್ತು ಅವರತ್ತ ದೃಷ್ಟಿ ನೆಟ್ಟಿರುತ್ತದೆ, ಅವರು ನಮ್ಮೂರಿನ ಸೀರೆಯಲ್ಲಿ ಬಲಿಷ್ಠ ಭಾರತ ದೇಶದ ಬಜೆಟ್ ಮಂಡಿಸುತ್ತಿರುವುದು ನಮ್ಮ ಜಿಲ್ಲೆ, ರಾಜ್ಯಕ್ಕೆ ಹೆಮ್ಮೆ ಮೂಡಿಸಿದೆ. ಮತ್ತು ಕಸೂತಿ ಅಂತಹ ಗ್ರಾಮೀಣ ಕಲೆಗಳಿಗೆ, ಮಹಿಳೆಯರಿಗೆ ಈ ಮೂಲಕ ಬೆಂಬಲಿಸಿ, ಪ್ರೋತ್ಸಾಹ ನೀಡುತ್ತಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಸೂತಿ ಕಲೆ ತಜ್ಞೆ ಆರತಿ ಹಿರೇಮಠ ಕೃತಜ್ಞತೆ ಸಲ್ಲಿಸಿದ್ದಾರೆ.


Spread the love

About Laxminews 24x7

Check Also

ಗ್ಯಾಸ್ ಸಿಲಿಂಡ‌ರ್ ಸ್ಫೋಟಗೊಂಡು ಓರ್ವ ಮಹಿಳೆ ಮೃತ್ಯು. ನಾಲ್ವರಿಗೆ ಗಾಯ

Spread the love ಧಾರವಾಡ : ಸಿಲಿಂಡ‌ರ್ ಸ್ಫೋಟಗೊಂಡು ಓರ್ವ ಮಹಿಳೆ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ತಾಲೂಕಿನ ಕಲ್ಲೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ