ವಾಡಿ: ಹಳಿ ತುಂಡಾದ ಪರಿಣಾಮ ಸುಮಾರು ಮೂವತ್ತು ಬೋಗಿಗಳುಳ್ಳ ಗೂಡ್ಸ್ ರೈಲು ಅಪಘಾತಕ್ಕೀಡಾದ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಲಹಳ್ಳಿ ಗ್ರಾಮದ ಬಳಿ ಸಂಭವಿಸಿದೆ.
ಶನಿವಾರ ಮಧ್ಯಾಹ್ನ ಹೈದರಾಬಾದ್ ನಿಂದ ವಾಡಿ ಮಾರ್ಗವಾಗಿ ಬರುತ್ತಿದ್ದ ಸಿಮೆಂಟ್ ಸಾಗಾಣಿಕೆ ಗೂಡ್ಸ್ ರೈಲು ಚಿತ್ತಾಪುರ ನಿಲ್ದಾಣ ದಾಟಿದ ಕೆಲವೇ ಹೊತ್ತಿನಲ್ಲಿ ಬೋಗಿಗಳು ಹಳಿ ತಪ್ಪಿ ಉರುಳಿ ಬಿದ್ದಿವೆ.
ಘಟನೆಯಿಂದ ಎರಡು ಬೋಗಿಗಳು ಮುಗುಚಿ ಬಿದ್ದಿದ್ದು. ಬೋಗಿಗಳಲ್ಲಿದ್ದ ನೂರಾರು ಟನ್ ತೂಕದ ಸಿಮೆಂಟ್ ಚೀಲಗಳು ಕೆಳಗೆ ಬಿದ್ದಿವೆ. ಘಟನೆಯಲ್ಲಿ ಯಾವೂದೇ ಜೀವ ಹಾನಿ ಸಂಭವಿಸಿಲ್ಲ.
ರೈಲ್ವೆ ಅಧಿಕಾರಿಗಳು ಹಾಗೂ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಯಂತ್ರಗಳ ಸಹಾಯದಿಂದ ಬೋಗಿಗಳನ್ನು ಎತ್ತುವ ಕಾರ್ಯ ಸಾಗಿದೆ ಎಂದು ವಾಡಿ ರೈಲ್ವೆ ಠಾಣೆಯ ಪಿಎಸ್ಐ ತಿಳಿಸಿದ್ದಾರೆ. ಘಟನೆಯಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.