ಹುಬ್ಬಳ್ಳಿ: ಬಿಜೆಪಿಯವರದ್ದು ಸುಳ್ಳಿನ ಯುನಿವರ್ಸಿಟಿ ಇದ್ದಹಾಗೆ. ರಾಜ್ಯ, ಗೋವಾ, ಕೇಂದ್ರದಲ್ಲಿ ತನ್ನದೆಯಾದ ಬಿಜೆಪಿ ಸರಕಾರ ಇದ್ದರೂ ಮೂರು ವರ್ಷದಿಂದ ಮಹಾದಾಯಿ ಯೋಜನೆ ಜಾರಿಗೊಳಿಸಲು ಆಗಿಲ್ಲ. ಈಗ ನಾವು ಜನರ ಧ್ವನಿ ಎತ್ತಿದಾಗ ಹೆದರಿ ಡಿಪಿಆರ್ ಗೆ ಅನುಮತಿ ಪಡೆದುಕೊಂಡು ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.
ಶಿವಕುಮಾರ್ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಸೇರಿ ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದೇವೆ. ಈಗ ಬಿಜೆಪಿಯವರು ಸುಪ್ರೀಂ ಕೋರ್ಟ್ ತೀರ್ಪಿಗೆ ಒಳಪಟ್ಟು ಕಾಮಗಾರಿ ಆರಂಭಿಸಿ ಎಂದು ಪತ್ರ ಸಿದ್ಧಪಡಿಸಿದ್ದಾರೆ. ಗೋವಾ ಮಂತ್ರಿಯೊಬ್ಬ ರಾಜೀನಾಮೆ ಕೊಡುತ್ತಾರಂತೆ ಕೊಡಲಿ ಬಿಡಿ. ರಾಜ್ಯದಲ್ಲಿ 26 ಸಂಸದರು ಬಿಜೆಪಿಯವರಿದ್ದಾರೆ. ಸುಮಲತಾ ಕೂಡ ಬಿಜೆಪಿ ಅಸೋಸಿಯೇಟ್ ಮೆಂಬರ್. ಮಹಾದಾಯಿಗೆ ಇವರೆಲ್ಲ ಸೇರಿ ಪ್ರಧಾನಮಂತ್ರಿಗಳ ಬಳಿ ಒಮ್ಮೆಯೂ ಮಾತನಾಡಿಲ್ಲ. ನೀರು ಹರಿಸುವ ಮುನ್ನ ಮೂಲಭೂತ ಕಾಮಗಾರಿಯನ್ನಾದರೂ ಪೂರ್ಣಗೊಳಿಸಬಹುದಿತ್ತು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಷ್ಟೊಂದು ಅಪ್ ಡೇಟೆಡ್ ಇದ್ದಾರೆ ಅನ್ನೊದು, ಪತ್ರ ಓದಲಿ ಗೊತ್ತಾಗುತ್ತೆ.ಕೇಂದ್ರ ಸರಕಾರ ಅನುಮತಿ ನೀಡಿದ ಪತ್ರದಲ್ಲಿ ಕಂಡಿಷನ್ ಹಾಕಿದ್ದಾರೆ. ನಾವು ಅದನ್ನು ಸರಿಯಾಗಿ ನೋಡಿಕೊಂಡಿದ್ದೇವೆ. ನಾವೆಲ್ಲ ಸತ್ತ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ಬರುತ್ತಾ? ನಮಗೆ ಅಧಿಕಾರ ಕೊಡ್ರಿ ಆರು ತಿಂಗಳಲ್ಲಿ ಆ ಯೋಜನೆಯನ್ನು ಬಡಿದು ಹಾಕುತ್ತೇವೆ ಎಂದರು