ಹುಬ್ಬಳ್ಳಿ: ಹಾವೇರಿ, ದಾವಣಗೆರೆ, ಉತ್ತರ ಕನ್ನಡ, ಗದಗ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಿಂದ ಉದ್ಯೋಗ, ವ್ಯಾಪಾರ, ಆಸ್ಪತ್ರೆಗಳಿಗಾಗಿ ಹುಬ್ಬಳ್ಳಿ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ನಿತ್ಯ ಸಾವಿರಾರು ಮಂದಿ ವಾಯವ್ಯ ಸಾರಿಗೆ ಸಂಸ್ಥೆಯ (NWKRTC) ಬಸ್ಗಳಲ್ಲಿ ನಗರಕ್ಕೆ ಬಂದು, ಎಲ್ಲಿ ಇಳಿಯಬೇಕು ಎಂದು ಗೊತ್ತಾಗದೆ ಪರದಾಡುವುದು ಸಾಮಾನ್ಯವಾಗಿದೆ.
ನಗರದಲ್ಲಿ ನಿಗದಿತ ಸ್ಥಳಗಳಲ್ಲಿ ತಾತ್ಕಾಲಿಕ ಬಸ್ ನಿಲುಗಡೆ ವ್ಯವಸ್ಥೆ ಇಲ್ಲ. ಒಂದೇ ನಿಲ್ದಾಣಕ್ಕೆ ಮೂರು, ನಾಲ್ಕು ಮಾರ್ಗವಾಗಿ ಬಸ್ಗಳು ಬರುವುದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಸಂಸ್ಥೆಯ ಬಗ್ಗೆ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಅವ್ಯವಸ್ಥೆಯನ್ನೆ ವ್ಯವಸ್ಥೆಯನ್ನಾಗಿ ಮಾಡಿಕೊಂಡಿರುವ NWKRTC ಪ್ರಯಾಣಿಕರಿಗೆ ಸೂಕ್ತ ಸೌಲಭ್ಯಗಳನ್ನು ಕೊಡುವ ಬಗ್ಗೆ, ಕಾಲಕಾಲಕ್ಕೆ ಸುಧಾರಣೆಗಳನ್ನು ಕೊಡುವುದನ್ನು ಮರೆತು ಕೂತಿದೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
ಹಾವೇರಿಯಿಂದ ಬರುವ ಬಸ್ ಹುಬ್ಬಳ್ಳಿ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿಯಿಂದ ಕಮರಿಪೇಟೆ ಪೊಲೀಸ್ ಠಾಣೆ ಹತ್ತಿರ ಬಂದು, ಹೊಸ ಬಸ್ ನಿಲ್ದಾಣಕ್ಕೆ ತೆರಳುತ್ತದೆ. ಇನ್ನೊಂದು ಬಸ್ ಗಬ್ಬೂರ ಬೈಪಾಸ್ನಿಂದ ಸಾಗಿದರೆ, ಮತ್ತೊಂದು ಚನ್ನಮ್ಮ ಸರ್ಕಲ್ ಸುತ್ತಿ ಬರುತ್ತದೆ. ಹುಬ್ಬಳ್ಳಿಯಿಂದ ವಿವಿಧೆಡೆ ಹೊರಡುವ ಬಸ್ಗಳೂ ಇದೇ ರೀತಿ ಸಂಚರಿಸುತ್ತವೆ. ನಿರ್ದಿಷ್ಟ ನಿಲುಗಡೆಯ ಪ್ರದೇಶ ಇಲ್ಲದೆ, ಎಲ್ಲೆಂದರಲ್ಲಿ ಬಸ್ಗಳು ಚಲಿಸುತ್ತವೆ. ಇದರಿಂದಾಗಿ, ಎಲ್ಲಿ ಇಳಿಯಬೇಕು ಹಾಗೂ ಕಾಯಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ.
‘ಚಾಲಕರು ತಮಗೆ ಇಷ್ಟ ಬಂದಲ್ಲಿ ಬಸ್ ನಿಲ್ಲಿಸುತ್ತಾರೆ. ಇದರಿಂದಾಗಿ ಪ್ರಯಾಣಿಕರಿಗೆ ಕಷ್ಟವಾಗುತ್ತದೆ. ಊರಿನ ಬಸ್ ಹಿಡಿಯುವುದಕ್ಕೆ ಅಥವಾ ಕೆಲಸಕ್ಕಾಗಿ ಆಟೊ ಹಿಡಿದುಕೊಂಡು, ಇಲ್ಲವೇ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಮಕ್ಕಳನ್ನು ಕರೆದುಕೊಂಡು ಬಂದು ಹಲವು ಬಾರಿ ಸಮಸ್ಯೆ ಎದುರಿಸಿದ್ದೇನೆ’ ಎಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರದ ಸುನಿತಾ ಸೊಲಬಕ್ಕನವರ ಬೇಸರ ವ್ಯಕ್ತಪಡಿಸುತ್ತಾರೆ.