Breaking News
Home / ರಾಜಕೀಯ / ಯತ್ನಾಳ ಮಾತ್ರವಲ್ಲ ಯಾರಾದರೂ ದಾಖಲೆ ಬಿಡುಗಡೆ ಮಾಡಲಿ: ವಚನಾನಂದಶ್ರೀ

ಯತ್ನಾಳ ಮಾತ್ರವಲ್ಲ ಯಾರಾದರೂ ದಾಖಲೆ ಬಿಡುಗಡೆ ಮಾಡಲಿ: ವಚನಾನಂದಶ್ರೀ

Spread the love

ವಿಜಯಪುರ: ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಪಾದಯಾತ್ರೆ ಹೋರಾಟಕ್ಕೆ ಮುನ್ನವೇ ಸರ್ಕಾರ ಹರಿಹರ ಪಂಚಮಸಾಲಿ ಪೀಠದ ಅಭಿವೃದ್ಧಿ, ವಿದ್ಯಾರ್ಥಿ ವಸತಿ ನಿಲಗಳಿಗೆ 10 ಕೋಟಿ ರೂ. ನೀಡಿದೆ. ನೀಡಿದ ಅನುದಾನ ಪಾರದರ್ಶಕವಾಗಿ ಬಳಕೆಯಾಗಿದೆ. ಹೀಗಾಗಿ ಯತ್ನಾಳ ಮಾತ್ರವಲ್ಲ ಯಾರು ಬೇಕಾದರೂ ದಾಖಲೆ ಬಿಡುಗಡೆ ಮಾಡಲಿ ಎಂದು ಹರಿಹರ ವೀರಶೈವ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಶ್ರೀಗಳು ಹೇಳಿದರು.

 

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರದ ನಮ್ಮ ಪೀಠಕ್ಕೂ, ಕನಕಗು ಪೀಠಕ್ಕೂ ಸರ್ಕಾರ ತಲಾ 10 ಕೋಟಿ ರೂ. ಬಿಡುಗಡೆ ಮಾಡಿದೆ. ಅಭಿವೃದ್ಧಿ ಕಾಮಗಾರಿ ನಡೆದು, ಬಿಡುಗಡೆಯಾದ ಹಣದ ಬಳಕೆ ಬಳಿಕ ಹಂತಹಂತವಾಗಿ ಹಣ ಬರುತ್ತದೆ. ಎಲ್ಲ ಅನುದಾನವೂ ಪಾರದರ್ಶಕ ಬಳಕೆಯಾಗಿದೆ. ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಯಾರುಬೇಕಾದರೂ ದಾಖಲೆ ಪಡೆಯಬಹುದು ಎಂದರು.

ಸರ್ಕಾರ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟಕ್ಕೆ ಸ್ಪಂದಿಸಿದ್ದು, ಶೀಘ್ರವೇ ಸಿಹಿಸುದ್ದಿ ಹೊರಬರಲಿದೆ ಎಂದರು.

ಬೆಳಗಾವಿ ಅಧಿವೇಶನದ ಪೂರ್ವದಲ್ಲೇ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು, ಕಾನೂನು ತೊಡಕು ಆಗದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಘೋಷಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು ವರದಿ ಸಲ್ಲಿಕೆ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸರ್ವಪಕ್ಷಗಳ ನಾಯಕರ ಸಭೆ ಕರೆದು, ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ. ಹೀಗಾಗಿ ಖುದ್ದು ನಾವೇ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸರ್ವಪಕ್ಷಗಳ ಸಭೆಯಲ್ಲಿ ನಮ್ಮ ಸಮುದಾಯದ ಪರವಾಗಿ ನಿಲ್ಲುವಂತೆ ಮನವಿ ಮಾಡಿದ್ದಾಗಿ ವಿವರಿಸಿದರು.

ನಮ್ಮ ಹೋರಾಟ ಹಾಗೂ ಬೇಡಿಕೆ ಕೇವಲ 2ಎ ಮೀಸಲಾತಿ ಮಾತ್ರವಲ್ಲ, ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಯಲ್ಲಿ ಪಂಚಮಸಾಲಿ ಸಮಾಜ ಮಾತ್ರವಲ್ಲ ಇಡೀ ವೀರಶೈವ ಲಿಂಗಾಯತ ಸಮುದಾಯವನ್ನು ಸೇರ್ಪಡೆ ಮಾಡಬೇಕು. ಇದರಿಂದ ಕೇಂದ್ರ ಸರ್ಕಾರದಲ್ಲಿ ಐಎಎಸ್, ಐಪಿಎಸ್, ಐಎಫ್‌ಎಸ್ ನಂಥ ಉನ್ನತ ಹುದ್ದೆಗೇರಲು ನಮ್ಮ ವೀರಶೈವ ಲಿಂಗಾಯತ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಸಹಕಾರಿ ಆಗಲಿದೆ ಎಂದರು.

ಇದಕ್ಕಾಗಿ 28 ವರ್ಷಗಳ ಸುದೀರ್ಘ ಹೋರಾಟ ನಡೆಸಿದ್ದು, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗಲೇ ಈ ಬಗ್ಗೆ ಧ್ವನಿ ಎತ್ತಲಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಾತಿಗಳ ಪಟ್ಟಿಯಲ್ಲೇ ಇಲ್ಲದ ಪಂಚಮಸಾಲಿ ಸಮಾಜವನ್ನು ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದರಿಂದ 3ಬಿ ಮೀಸಲಾತಿ ಪಡೆಯಲು ಅವಕಾಶ ಸಿಕ್ಕಿತು ಎಂದು ವಿವರಿಸಿದರು.

ಆಲಗೂರು ಪಂಚಮಸಾಲಿ ಪೀಠದ ಡಾ.ಮಹದೇವ ಶ್ರೀಗಳು, ಡಾ.ಸುರೇಶ ಬಿರಾದಾರ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಗುರುಶಾಂತ ನಿಡೋಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಮೊಸಳೆಗಳಿವೆ ಎಚ್ಚರಿಕೆ!

Spread the love ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮನುಷ್ಯ ಮತ್ತು ಮೊಸಳೆಗಳ ಸಂಘರ್ಷ ಬೇಸಿಗೆಯಲ್ಲಿ ಅಧಿಕ. ಕೃಷ್ಣಾ ನದಿಯಲ್ಲಿ ನೀರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ