ಹುಬ್ಬಳ್ಳಿ: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾ ಇಂದಿನಿಂದ ಬಿಡುಗಡೆಯಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯ ಪಿವಿಆರ್, ಅಪ್ಸರಾ ಹಾಗೂ ಸಿನಿಪೊಲೀಸ್ ಚಿತ್ರಮಂದಿರದಲ್ಲಿ ವಿಜಯಾನಂದ ಅದ್ಧೂರಿಯಾಗಿ ತೆರೆಕಂಡಿದೆ.
ಪಿವಿಆರ್ ಸಿನಿಮಾದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಅಭಿಮಾನಿಗಳು ಹಾಗೂ ಉದ್ಯಮಿಗಳಿಂದ ಶುಕ್ರವಾರ ಬೆಳಗ್ಗೆ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.
ಚಲನಚಿತ್ರ ಪ್ರದರ್ಶನದ ಮುಂಚೆ ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಕೆಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಮತ್ತಿತರರು ಡಾ. ವಿಜಯ ಸಂಕೇಶ್ವರ ಅವರನ್ನು ಸನ್ಮಾನಿಸಿ, ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ವಿಜಯ ಸಂಕೇಶ್ವರ, ನನ್ನ ಜೀವನದಲ್ಲಿ ಏರಿಳತಗಳು ಬಂದಾಗ ಲಕ್ಷಾಂತರ ಜನರು ಬೆನ್ನಿಗೆ ನಿಂತು ಸಹಾಯ ಮಾಡಿದ್ದಾರೆ. ಸಾವಿರಾರು ಜನರ ಆಶೀರ್ವಾದ ನನ್ನ ಮೇಲಿದೆ. ನನ್ನ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ನಾನು ನಡೆಯುತ್ತಿದ್ದೇನೆ. ಅದೇ ರೀತಿ ನಾನು ಹಾಕಿಕೊಟ್ಟ ಮಾರ್ಗದಲ್ಲಿ ನನ್ನ ಮಗ ಹಾಗೂ ಮೊಮ್ಮಗ ನಡೆಯುತ್ತಿದ್ದಾರೆ. ನನಗೆ ಸಿಕ್ಕಿರುವ ಗೌರವದಲ್ಲಿ ನನ್ನ ಇಪ್ಪತ್ತು ಸಾವಿರ ಸಿಬ್ಬಂದಿಯ ಪಾಲೂ ಇದೆ. ನನ್ನ ಯಶಸ್ಸಿನ ಹಿಂದೆ ಧರ್ಮಪತ್ನಿಯ ಸಹಕಾರವೂ ಇದೆ ಎಂದರು.