ಬೆಂಗಳೂರು: ನಿನ್ನೆ ಇಡೀ ದಿನ ಸಿಬಿಐ ವಿಚಾರಣೆ ಎದುರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ನಂಜಾವಧೂತ ಶ್ರೀಗಳು ಭೇಟಿ ಮಾಡಿ ಸಮಾಧಾನ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದ್ದ ನಂಜಾವಧೂತ ಶ್ರೀಗಳ ಬಳಿ ಡಿ.ಕೆ. ಶಿವಕುಮಾರ್ ಅವರು ನೋವು ಹೇಳಿಕೊಂಡಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇ ಬಿಜೆಪಿಯವರಿಗೆ ತಪ್ಪಾಗಿದೆ. ನಾನು ಆಯಕ್ಟೀವ್ ಆಗಿರುವುದನ್ನು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಈಗ ಸಿಬಿಐನವರು ದಾಳಿ ಮಾಡುವ ಅಗತ್ಯವಿರಲಿಲ್ಲ. ಉಪ ಚುನಾವಣೆ ಹಿನ್ನೆಲೆಯಲ್ಲಿಯೇ ನನ್ನನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಎಲ್ಲವನ್ನೂ ನೋಡಿದ್ದೀನಿ ಇದೂ ಒಂದು ಭಾಗವಷ್ಟೇ. ನನ್ನ ಮೇಲೆ ರೇಡ್ ಮಾಡಿದ್ದು ಬೇಸರವಿಲ್ಲ. ಎಲ್ಲದಕ್ಕೂ ನನ್ನ ಬಳಿ ದಾಖಲೆ ಇದೆ ಎಂದು ಶ್ರೀಗಳ ಬಳಿ ಮಾತನಾಡಿದ್ದಾರೆ.
ರೇಡ್ ಮಾಡಿರುವುದಕ್ಕೆ ಬೇಸರವಿಲ್ಲ, ಆದರೆ ಮಗಳ ಮದುವೆಗೆ ತಂದಿದ್ದ ಚಿನ್ನವನ್ನು ಜಪ್ತಿ ಮಾಡಿದ್ದು ನೋವಾಗಿದೆ ಎಂದು ಸ್ವಾಮೀಜಿ ಮುಂದೆ ಡಿಕೆ ಶಿವಕುಮಾರ್ ನೋವು ತೋಡಿಕೊಂಡಿದ್ದಾರೆ. ಇಷ್ಟೇ ಅಲ್ಲ ನನ್ನ ಪಿಎ ಹಾಗೂ ಕಚೇರಿ ಸಿಬ್ಬಂದಿ ಮೇಲೆ ಸಿಬಿಐ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಡಿಕೆಶಿ ಮಾಡಿದ್ದಾರೆ.
ನಿನ್ನೆ ಇಡೀ ದಿನ ಡಿಕೆಶಿ ಅವರ 15 ಆಸ್ತಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಜೊತೆಗೆ ಚಿನ್ನ ಹಾಗೂ ನಗದು ಹಣವನ್ನು ಕೂಡ ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ದಾಳಿ ಮುಕ್ತಾಯವಾದ ಬಳಿಕ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿಕೆ ಸುರೇಶ್ ಅವರು ಮಾದ್ಯಮಗಳೊಂದಿಗೆ ಮಾತನಾಡಿ, ಸಿಬಿಐ ಅಧಿಕಾರಿಗಳಿಗೆ ತನಿಖೆಗೆ ಸಹಕಾರ ಕೊಟ್ಟಿದ್ದಾಗಿ ಹೇಳಿದ್ದರು.