ಕೊಪ್ಪಳ: ಸಮಸ್ತ ವೀರಶೈವ ಲಿಂಗಾಯತ ಸಮುದಾಯಕ್ಕೇ 2ಎ ಮೀಸಲಾತಿ ಸಿಗಲಿದೆ ಎಂಬುದಾಗಿ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದ್ದಾರೆ. ಕೊಪ್ಪಳದಲ್ಲಿ ಇಂದು ಈ ವಿಷಯವಾಗಿ ಮಾತನಾಡಿರುವ ಅವರು, ಸಮಸ್ತ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಉದ್ದೇಶ, ಅದು ಈಡೇರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸಮಸ್ತ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕೇ ಹೊರತು ಕೇವಲ ಪಂಚಮಸಾಲಿಗೆ ಮಾತ್ರ ಬೇಡ ಎಂದಿದ್ದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಅದೇ ಕಾರಣಕ್ಕೆ ಕೆಲವರು ನನ್ನನ್ನು ಪಂಚಮಸಾಲಿ ವಿರೋಧಿ ಎನ್ನುವಂತೆ ಬಿಂಬಿಸಿದ್ದಾರೆ. ಆದರೆ ಹಾಗೆ ವಿರೋಧಿಸುವವರ ಕೊಡುಗೆ ಸಮಾಜಕ್ಕೇನು, ನನ್ನ ಕೊಡುಗೆ ಏನು ಎಂಬುದು ಜನರಿಗೆ ಚೆನ್ನಾಗಿ ತಿಳಿದಿದೆ ಎನ್ನುವ ಮೂಲಕ ನಿರಾಣಿಯವರು, ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಪರೋಕ್ಷವಾಗಿ ದನಿ ಎತ್ತಿದ್ದಾರೆ.
ಮುರುಗೇಶ ನಿರಾಣಿಯವರು ಕುಟುಂಬ ರಾಜಕಾರಣ ವಿಚಾರವಾಗಿಯೂ ಮಾತನಾಡಿದ್ದು, ತಮ್ಮ ಪುತ್ರ ರಾಜಕೀಯಕ್ಕೆ ಬರುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಪುತ್ರನಿಗೆ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂಬುದನ್ನೂ ತಿಳಿಸಿದ್ದಾರೆ.
ಸದ್ಯ ನಮ್ಮ ಕುಟುಂಬದಲ್ಲಿ ಹನಮಂತ ನಿರಾಣಿ ಮತ್ತು ನಾನು ಮಾತ್ರ ರಾಜಕೀಯದಲ್ಲಿ ಇರುತ್ತೇವೆ. ನಮ್ಮನ್ನು ಬಿಟ್ಟು ಇನ್ನೊಬ್ಬರು ಬರುವುದಿಲ್ಲ. ಬಂದರೆ ಸಹೋದರ ಸಂಗಮೇಶ್ ಬರಬಹುದು, ಮಗ ಮಾತ್ರ ಖಂಡಿತ ರಾಜಕೀಯಕ್ಕೆ ಬರುವುದಿಲ್ಲ. ಮಾತ್ರವಲ್ಲ, ನಮ್ಮ ಕುಟುಂಬದಿಂದ ಇನ್ಯಾರೇ ರಾಜಕೀಯಕ್ಕೆ ಬಂದರೂ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂಬುದಾಗಿ ನಿರಾಣಿ ಹೇಳಿದ್ದಾರೆ.