ನವದೆಹಲಿ: ಶ್ರದ್ದಾ ವಾಲ್ಕರ್ ಳನ್ನು ಕ್ರೂರವಾಗಿ ಕೊಂದು ಹಾಕಿರುವ ಹಂತಕ ಅಫ್ತಾಬ್ ಅಮಿನ್ ಪೂನಾವಾಲನನ್ನು ನ್ಯಾಯಾಲಯ ಗಲ್ಲಿಗೇರಿಸುವವರೆಗೆ ವಿರಮಿಸುವುದಿಲ್ಲ ಎಂದು ಶ್ರದ್ದಾ ತಂದೆ ವಿಕಾಸ್ ವಾಲ್ಕರ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ವಿಕಾಸ್ ವಾಲ್ಕರ್, ಕೊಲೆಗಡುಕ ಅಫ್ತಾಬ್ ತುಂಬಾ ಚಾಣಾಕ್ಷ್ಯನಾಗಿದ್ದು, ಆತ ತನ್ನ ವಿರುದ್ಧದ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದ್ದಾನೆ. ಕಳೆದ ಐದಾರು ತಿಂಗಳಿನಿಂದ ಆತ ಎಲ್ಲಾ ಪುರಾವೆ ನಾಶ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಸಾಕ್ಷ್ಯ ನಾಶಗೊಳಿಸಿದ್ದರಿಂದ ಸತ್ಯವನ್ನು ಹೊರತರುವುದು ಪೊಲೀಸರಿಗೆ ಕಷ್ಟವಾಗಬಹುದು. ಏನೇ ಆದರೂ ಅಫ್ತಾಬ್ ಗೆ ಮರಣದಂಡನೆ ವಿಧಿಸುವವರೆಗೆ ತನ್ನ ಹೋರಾಟ ಮುಂದುವರಿಯಲಿದೆ ಎಂದು ವಿಕಾಸ್ ವಾಲ್ಕರ್ ಎಎನ್ ಐಗೆ ತಿಳಿಸಿದ್ದಾರೆ.
ಅಫ್ತಾಬ್ ವಿಚಾರಣೆ ವೇಳೆ ಕೆಲವೊಮ್ಮೆ ಸುಳ್ಳು ಮತ್ತೆ ಕೆಲವು ಬಾರಿ ಸತ್ಯ ಹೇಳುತ್ತಿದ್ದಾನೆ ಎಂಬುದು ಪೊಲೀಸರಿಗೆ ತಿಳಿದಿದೆ. ಈಗಾಗಲೇ ಕೋರ್ಟ್ ಕೂಡಾ ಆತನ ಮಂಪರು ಪರೀಕ್ಷೆಗೆ ಅನುಮತಿ ನೀಡಿದ್ದು, ಇದರಿಂದ ನ್ಯಾಯ ಸಿಗಬಹುದು ಎಂದು ಭರವಸೆ ಹೊಂದಿರುವುದಾಗಿ ವಿಕಾಸ್ ಹೇಳಿದರು.
ಒಂದು ವೇಳೆ ಆತ ಆರೋಪಿ ಎಂದಾದಲ್ಲಿ, ಅಫ್ತಾಬ್ ನನ್ನು ಗಲ್ಲಿಗೇರಿಸಬೇಕು. ಆತ ಯಾವಾಗಲೂ ಸುಳ್ಳನ್ನೇ ಹೇಳುತ್ತಾನೆ ಎಂಬುದಾಗಿ ಮುಂಬೈ ಮತ್ತು ದೆಹಲಿ ಪೊಲೀಸರಿಗೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ತನಿಖೆಗೆ ಸಹಕಾರಿಯಾಗಲಿದೆಯಾ ನೀರಿನ ಶುಲ್ಕ ಬಾಕಿ?
ಶ್ರದ್ದಾ ವಾಲ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಹೊಸ ತಿರುವು ಲಭ್ಯವಾಗಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಫ್ತಾಬ್ ಪೂನಾವಾಲ ತನ್ನ ಫ್ಲ್ಯಾಟ್ ನ ನೀರಿನ ಶುಲ್ಕ ಪಾವತಿ ಬಾಕಿ ಇಟ್ಟಿರುವುದು ಪತ್ತೆಯಾಗಿದೆ. ಮೂಲಗಳ ಪ್ರಕಾರ, ದೆಹಲಿ ಸರ್ಕಾರ 20,000 ಲೀಟರ್ ಅನ್ನು ಉಚಿತವಾಗಿ ನೀಡುತ್ತಿದೆ. ನೆರೆಹೊರೆಯವರ ಹೇಳಿಕೆ ಪ್ರಕಾರ, ಅಫ್ತಾಬ್ ನ 300 ರೂಪಾಯಿ ನೀರಿನ ಶುಲ್ಕ ಬಾಕಿ ಇದ್ದಿರುವುದಾಗಿ ತಿಳಿಸಿದ್ದಾರೆ. ದೆಹಲಿ ಸರ್ಕಾರ 20,000 ಲೀಟರ್ ಉಚಿತವಾಗಿ ನೀಡಿದರೂ ಕೂಡಾ ಅತ್ಯಧಿಕ ನೀರು ಬಳಸಿರುವುದು ಯಾಕೆ ಎಂಬ ಆಯಾಮದಲ್ಲಿ ತನಿಖೆ ನಡೆಸಲು ಸಹಕಾರಿಯಾಗಲಿದೆ ಎಂದು ವರದಿ ತಿಳಿಸಿದೆ.