ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಮತಿ ತಾಲೂಕಿನ ಕುಂಕುವ ವೃತ್ತದ ಗ್ರಾಮಲೆಕ್ಕಿಗ ಎಸ್.ಪ್ರಶಾಂತ್ಕುಮಾರ್ ಎಂಬುವವರು, ಶಾಸಕ ರೇಣುಕಾಚಾರ್ಯ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವ ಜತೆಗೆ ತಮ್ಮನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕೋರಿ ದೂರು ಸಲ್ಲಿಸಿದ್ದಾರೆ.
ರೇಣುಕಾಚಾರ್ಯ ವಿರುದ್ಧ ಐಪಿಸಿ ಕಲಂ 186 ಅಡಿಯಲ್ಲಿ ದೂರು ದಾಖಲಾಗಿದೆ. ಈಚೆಗೆ ನ್ಯಾಮತಿ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಮನೆಗಳಿಗೆ ಹಾನಿಯಾಗಿತ್ತು. ಕುಂಕುವ ವೃತ್ತ ವ್ಯಾಪ್ತಿಯ ಕೂಗೆನಹಳ್ಳಿ ಗ್ರಾಮದ ಕೆಲವರಿಗೆ ಪರಿಹಾರ ಬರುವಂತೆ ವರದಿ, ಶ್ರೇಣಿ ಬದಲಾಯಿಸುವಂತೆ ತಮ್ಮ ಮೇಲೆ ಒತ್ತಡ ಹಾಕಿದ್ದಲ್ಲದೆ ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಪ್ರಶಾಂತ್ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.