ಬೆಂಗಳೂರು: ಮಹಾಮಾರಿ ಕೊರೊನಾ ರುದ್ರ ನರ್ತನ ಮುಂದುವರಿಸಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ನಮ್ಮ ದೇಶದಲ್ಲಿ ಕೊರೊನಾದ ಅಟ್ಟಹಾಸ ಜೋರಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಒಂದು ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪ್ಲ್ಯಾನ್ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಮತ್ತು ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ರಾಜ್ಯದಲ್ಲಿ 6 ಲಕ್ಷದ ಗಡಿ ಬಳಿ ಸೋಂಕಿತರ ಸಂಖ್ಯೆ ಬಂದು ತಲುಪಿದೆ. ಬೆಂಗಳೂರು ಮಹಾನಗರದಲ್ಲಿ 2.5 ಲಕ್ಷದ ಬಳಿ ಬಂದಿದೆ. ಇದರಿಂದ ಆರೋಗ್ಯ ಇಲಾಖೆ ಇನ್ಮುಂದೆ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಯ ಆರೈಕೆಯನ್ನು ಅವರ ಕುಟುಂಬದವರಿಂದ ಮಾಡಿಸುವ ಪ್ಲ್ಯಾನ್ ಮಾಡಿದೆ. ಆರೋಗ್ಯ ಇಲಾಖೆಯಿಂದ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.
ಏನಿದು ಸಂಬಂಧಿಕರಿಂದ ಆರೈಕೆ ಪ್ಲ್ಯಾನ್?
ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಸಂಬಂಧಿಕರಿಂದಲೇ ಆರೈಕೆ ಮಾಡಿಸುವುದಾಗಿದೆ. ಸಂಬಂಧಿಕರು ರೋಗಿಯ ಆರೈಕೆ ಮಾಡುವುದು ಉತ್ತಮ ಅಂತ ಕೆಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಂಬಂಧಿಕರು ಸೋಂಕಿತರ ಜೊತೆಗಿದ್ದರೆ ಮಾನಸಿಕವಾಗಿ ಬೇಗ ಚೇತರಿಕೆ ಕಾಣಬಹುದು. ಇದಕ್ಕೆ ಸಂಬಂಧಿಕರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಬೇಕಾಗುತ್ತದೆ. ಪಿಪಿಇ ಕಿಟ್ ಧರಿಸಿಕೊಂಡು ಆರೈಕೆ ಬಗ್ಗೆ ಮಾಹಿತಿ ನೀಡಬೇಕು.
ಸೋಂಕಿತರಿಗೆ ಮನೆಯಿಂದ ಊಟ ತರಲು ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಸಂಬಂಧಿಕರು ಜೊತೆಗಿದ್ದರೆ ಕೊರೊನಾ ಸೋಂಕಿತರಿಗೆ ಖಿನ್ನತೆ ಕಡಿಮೆಯಾಗಿ ಮನೋಧೈರ್ಯ ಹೆಚ್ಚಳವಾಗುತ್ತದೆ. ಆದರೆ ಐಸೋಲೇಷನ್ನಲ್ಲಿರೋ ವ್ಯಕ್ತಿಯನ್ನು ಭೇಟಿಯಾಗಲು ಸಂಬಂಧಿಕರಿಗೆ ಅವಕಾಶ ಇರುವುದಿಲ್ಲ. ಆದರೆ ಸೋಂಕಿತರನ್ನು ನೋಡಿಕೊಳ್ಳುವ ಸಂಬಂಧಿಕರಿಗೆ ಸೋಂಕು ತಗುಲದಂತೆ ಎಚ್ಚರಿಕೆ ವಹಿಸುವುದೇ ಆರೋಗ್ಯ ಇಲಾಖೆಗೆ ಒಂದು ಸವಾಲಾಗುತ್ತದೆ.