ಧಾರವಾಡ: ಇಬ್ಬರು ಕಳ್ಳರು (Thieves) ಕಳ್ಳತನ ಮಾಡಲೆಂದು ಪೊಲೀಸ್ (Police) ಒಬ್ಬರ ಮನೆಗೆ ನುಗ್ಗಲು ಯತ್ನಿಸಿ, ಕೊನೆಗೆ ಪೊಲೀಸರ ಅತಿಥಿಯಾದ ಘಟನೆ ಧಾರವಾಡದ (Dharwad) ಸಾಧುನವರ ಎಸ್ಟೇಟ್ನಲ್ಲಿ ನಡೆದಿದೆ.
ಧಾರವಾಡದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕೆಲಸ ಮಾಡುತ್ತಿರುವ ಬಸವರಾಜ ಬಳಿಗೇರ ಅವರ ಮನೆಗೆ ಕಳ್ಳರು ತಡ ರಾತ್ರಿ ನುಗ್ಗಲು ಯತ್ನಿಸಿದ್ದರು. ಬಳಿಗೇರ ಅವರ ಮನೆ ಸಾಧುನವರ ಎಸ್ಟೇಟ್ನ ಬೆಟಗೇರಿ ಬಿಲ್ಡಿಂಗ್ನಲ್ಲಿದ್ದು, ಅವರ ಮನೆಗೆ ಇಬ್ಬರು ಕಳ್ಳರು ರಾತ್ರೋರಾತ್ರಿ ನುಗ್ಗಲು ಹೊಂಚು ಹಾಕಿ ಕುಳಿತುಕೊಂಡಿದ್ದರು.
ಈ ವೇಳೆ ಕಳ್ಳರ ಸಪ್ಪಳ ಕೇಳಿದ ಬಳಿಗೇರ ಹಾಗೂ ಅವರ ಪುತ್ರ, ಮೊದಲು ಮನೆಯ ಬಾಗಿಲು ತೆರೆದು ನೋಡಿದ್ದಾರೆ. ಆಗ ಯಾರೂ ಅವರ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ. ನಂತರ ಎರಡನೇ ಬಾರಿ ಕಳ್ಳರು ಪಿಸುಗುಡುತ್ತಿದ್ದುದನ್ನು ಕೇಳಿದ ಮನೆಯವರು ಒಬ್ಬ ಕಳ್ಳನನ್ನು ಹಿಡಿದಿದ್ದಾರೆ. ಆನಂತರ 112 ಸಹಾಯವಾಣಿಗೆ ಕರೆ ಮಾಡಿದ ಬಳಿಗೇರ ಪೊಲೀಸರ ಸಹಾಯದಿಂದ ಮತ್ತೊಬ್ಬ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಇಬ್ಬರೂ ಕಳ್ಳರನ್ನು ಹಿಡಿಯುವಾಗ ಒಬ್ಬ ಕಳ್ಳ ಎಎಸ್ಐ ಬಳಿಗೇರ ಅವರ ಮೂಗಿಗೆ ಪರಚಿದ್ದಾನೆ. ವಾಸು ಮಾದರ ಹಾಗೂ ಮೃತ್ಯುಂಜಯ ಮರೆಪ್ಪನವರ ಬಂಧಿತ ಕಳ್ಳರಾಗಿದ್ದು, ಈ ಇಬ್ಬರೂ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ. ಸದ್ಯ ಇಬ್ಬರನ್ನೂ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.