ಬೆಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ರೈತರು ಬೀದಿಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹರಿಲ್ಲದೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಹೌದು. ಬಂದ್ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಗ್ರಾಹಕರಿಗಾಗಿ ಕಾದು ಕಾದು ಸುಸ್ತಾಗಿ ಕುಳಿತಲ್ಲಿಯೇ ನಿದ್ದೆಗೆ ಜಾರಿರುವ ಪ್ರಸಂಗ ನಡೆದಿದೆ.
ವಿವಿಧ ಸಂಘಟನೆಗಳು ಇಂದು ಬಂದ್ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ನಗರದ ಪ್ರತಿಷ್ಠಿತ ಶ್ರೀ ಕೃಷ್ಣ ರಾಜೇಂದ್ರ ಮಾರುಕಟ್ಟೆ(ಸಿಟಿ) ಗಿರಾಕಿಗಳಿಲ್ಲದೆ ಭಣಗುಡುತ್ತಿತ್ತು. ಹೀಗಾಗಿ ಬೀದಿ ಬದಿಯ ವ್ಯಾಪಾರಿಗಳು ಗಿರಾಕಿಗಳನ್ನು ಕಾದು ಸುಸ್ತಾಗಿ ತರಕಾರಿ ಇದ್ದ ಗೋಣಿಚೀಲದ ಮೇಲೆ ತಲೆಯಿಟ್ಟು ನಿದ್ದೆ ಮಾಡಿದ್ದಾರೆ.
ಇತ್ತ ಮೆಜೆಸ್ಟಿಕ್ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ವಾಟಾಳ್ ನಾಗರಾಜ್ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದು, ಮೆಜೆಸ್ಟಿಕ್ ಮುಂಭಾಗ ಪೇಟ ತೊಟ್ಟು ಕತ್ತೆಯ ಮೇಲೆ ಮೆರವಣಿಗೆ ಬರುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೇ ವಾಟಾಳ್ ಮಂಗಳವಾದ್ಯಗಳ ದೊಡ್ಡ ತಂಡದೊಂದಿಗೆ ಆಗಮಿಸಿದ್ದರು. ಇವರ ಜೊತೆಗೆ ಕನ್ನಡಪರ ಹೋರಾಟಗಾರರು ಭಾಗಿಯಾಗಿದ್ದಾರೆ.
ಮಂಗಳವಾದ್ಯಗಳ ಮಧ್ಯೆ ಕತ್ತೆಯ ಮೇಲೆ ಕುಳಿತುಕೊಂಡು ವಾಟಾಳ್ ನಾಗರಾಜ್ ಇಡೀ ಮೆಜೆಸ್ಟಿಕ್ ರೌಂಡ್ಸ್ ಹಾಕಿದ್ದಾರೆ. ಇದೇ ವೇಳೆ ಮಾತನಾಡಿದ ವಾಟಾಳ್, ಇದು ಒಂದು ಅಪರೂಪದ ಚಳುವಳಿ. ವಿಶ್ವದಲ್ಲೇ ಇಂತಹ ಚಳುವಳಿ ನಡೆದಿಲ್ಲ. ಕತ್ತೆಯ ಮೇಲೆ ಕುಳಿತುಕೊಂಡು ಮೆರವಣಿಗೆ ಮಾಡುವ ಮೂಲಕ ರಾಜ್ಯ ಸರ್ಕಾರದ ನೀತಿಯನ್ನ ವಿರೋಧಿಸುತ್ತಿದ್ದೇವೆ. ಇಂತಹ ಪ್ರತಿಭಟನೆ ನೂರು ವರ್ಷಗಳಾದರೂ ಬರುವುದಿಲ್ಲ. ನಾವೆಲ್ಲರೂ ಪ್ರಾಮಾಣಿಕ ಕನ್ನಡ ಒಕ್ಕೂಟದ ಮುಖಂಡರು ಬಹಳ ನಿರಂತರವಾಗಿ ಹೋರಾಟ ಮಾಡಿದ್ದೇವೆ. ರೈತರಿಗಾಗಿ ನಾವು 50 ವರ್ಷಗಳಿಂದ ಹೋರಾಟ ಮಾಡಿದ್ದೇವೆ. ಇನ್ಮುಂದೆ ಮುಂದೆಯೂ ನಮ್ಮ ಉಸಿರುವ ಇರುವವರೆಗೂ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.