ಯಾವುದೇ ಕಾಮಗಾರಿಗಳಿಗಾಗಲಿ.. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಆರಂಭದಲ್ಲಿ ಇರುವ ಉತ್ಸಾಹ ಕಾಮಗಾರಿ ಮುಗಿದ ಮೇಲೆ ಇರುವುದೇ ಇಲ್ಲ. ಇದಕ್ಕೆ ಧಾರವಾಡವೇನೂ ಹೊರತಾಗಿಲ್ಲ. ಕಾಮಗಾರಿಗೆ ಅನುಮೋದನೆ ದೊರೆತು, ಅದು ಮುಕ್ತಾಯವಾಗುವವರೆಗೂ ಅಧಿಕಾರಿಗಳು, ಜನಪ್ರತಿನಿಧಿಗಳು ನಿರಂತರವಾಗಿ ಅಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಯಾವಾಗ ಕಾಮಗಾರಿ ಮುಗಿಯುತ್ತದೋ, ಅವರು ಕೂಡ ಅಲ್ಲಿಗೆ ಬರುವುದನ್ನು ನಿಲ್ಲಿಸಿ ಬಿಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಹುಬ್ಬಳ್ಳಿಯಲ್ಲಿ ನಿರ್ಮಿಸಲಾಗಿರುವ ಮೀನು ಮಾರುಕಟ್ಟೆ.
ಹುಬ್ಬಳ್ಳಿಯ ಗಣೇಶಪೇಟೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮೀನು ಮಾರುಕಟ್ಟೆ ಐದು ತಿಂಗಳು ಆದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಹಲವು ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿನ ವ್ಯಾಪಾರಸ್ಥರಿಗೆ ಬಿಸಿಲು, ಮಳೆಯಿಂದ ರಕ್ಷಣೆ ನೀಡಲು ಸ್ಮಾರ್ಟ್ ಸಿಟಿಯಿಂದ ಮಾರುಕಟ್ಟೆ ನಿರ್ಮಿಸಿದ್ದು, ತಿಂಗಳುಗಳು ಗತಿಸುತ್ತದ್ದರೂ ಉದ್ಘಾಟನೆಯಾಗದೇ ಮೀನು ವ್ಯಾಪಾರಸ್ಥರು ಬಯಲಿನಲ್ಲೇ ಬಿಸಿಲು, ಮಳೆ ಎನ್ನದೆ ಸಂತೆ ನಡೆಸುವಂತಾಗಿದೆ.
ಮೀನು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ವಾಹನಗಳಿಂದ ಮೀನು ಇಳಿಸಲು, ನೀರಿನ ತೊಟ್ಟಿ, ಶೌಚಗೃಹ- ಹೀಗೆ ಸಕಲ ಸೌಲಭ್ಯ ನೀಡಲಾಗಿದೆ. ಆದರೆ ಇಷ್ಟೆಲ್ಲ ಸೌಲಭ್ಯದ ಯೋಜನೆ ಸಿದ್ಧವಾಗಿದ್ದರೂ ವ್ಯಾಪಾರಸ್ಥರಿಗೆ ಅದು ಕನ್ನಡಿಯೊಳಗಿನ ಗಂಟಿನಂತಾಗಿದೆ. 2022 ಜನವರಿಗೆ ಮಾರುಕಟ್ಟೆ ಪೂರ್ಣಗೊಂಡಿದ್ದರೂ, ಇದುವರೆಗೂ ಉದ್ಘಾಟನೆಗೆ ಕಾಲ ಮಾತ್ರ ಕೂಡಿ ಬಂದಿಲ್ಲ.