ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್ಗಳಿಗೆ ಪಾತ್ರೆ ಮತ್ತಿತರೆಪರಿಕರಗಳನ್ನು ಸರಬರಾಜು ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಲಂಚದ ಬೇಡಿಕೆ ಇಟ್ಟಿದ್ದ ಸಹಾಯಕ ನಿರ್ದೇಶಕರ ಕಚೇರಿ ಪ್ರಥಮ ದರ್ಜೆ ಸಹಾಯಕನನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಪ್ರಥಮ ದರ್ಜೆ ಸಹಾಯಕ ನರಸಿಂಹಮೂರ್ತಿ ಬಂಧಿತ ಆರೋಪಿ.ಸಜ್ಜನಕೆರೆ ಗ್ರಾಮದ ಕಲ್ಲೇಶ್ವರ ಏಜೆನ್ಸಿ ಮಾಲಿಕ ಎಸ್.ಬಿ.ಲೋಕೇಶ್, ಆಗಸ್ಟ್ 2 ರಂದು ಸಮಾಜ ಕಲ್ಯಾಣ ಇಲಾಖೆ ಕರೆದಿದ್ದ ಟೆಂಡರ್ನಲ್ಲಿ ಭಾಗವಹಿಸಿ ಕಾರ್ಯಾದೇಶ ಪಡೆದು ಹಿಂಡಾಲಿಯಂ ಪಾತ್ರೆ, ಮುಚ್ಚಳ, ಮಿಕ್ಸಿ, ಸ್ಟೀಲ್ ಬಕೇಟ್ಗಳನ್ನು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಸರಬರಾಜು ಮಾಡಿದ್ದರು.
ಈ ಬಾಬ್ತು ಬಿಲ್ ಪಾವತಿ ಮಾಡಲು ಕೋರಿದಾಗ, 11 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸ್.ಬಿ.ಲೋಕೇಶ್ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು.
ಸೆ.22 ಗುರುವಾರ 11 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ನರಸಿಂಹಮೂರ್ತಿ ಹಣದ ಸಮೇತ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ಬಂಧಿಸಿದ್ದು, ಹಣವನ್ನು ಜಪ್ತಿ ಮಾಡಲಾಗಿದೆ. ಚಿತ್ರದುರ್ಗ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಜಿ.ಮಂಜುನಾಥ್ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.