ಬೆಂಗಳೂರು, ಸೆ.21- ಕೋವಿಡ್ -19 ಆತಂಕದ ನಡುವೆಯೇ ಇಂದಿನಿಂದ ಆರಂಭವಾದ ಮಳೆಗಾಲದ ಅಧಿವೇಶನಕ್ಕೆ ಮೊದಲ ದಿನವೇ ಬೆರಳೆಣಿಕೆಯಷ್ಟು ಜನಪ್ರತಿನಿಧಿಗಳು ಭಾಗವಹಿಸಿದ್ದು, ಕಲಾಪ ಕಾಟಾಚಾರಕ್ಕೆ ಸೀಮಿತವಾಗಿತ್ತು.
ಭಾರೀ ನಿರೀಕ್ಷೆ ಹಾಗೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಕೊರೊನಾ ಮಹಾಮಾರಿಯ ಆತಂಕ ಎಲ್ಲರಲ್ಲೂ ಮನೆ ಮಾಡಿತ್ತು. ಹೀಗಾಗಿ ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಕೇವಲ ಕೆಲವೇ ಕೆಲವು ಮಂದಿ ಸಚಿವರು ಹಾಗೂ ಶಾಸಕರು ಮಾತ್ರ ಭಾಗವಹಿಸಿದ್ದರು.
225 ಸದಸ್ಯ ಬಲದ ವಿಧಾನಸಭೆಯಲ್ಲಿ ಪ್ರಮುಖ ಮೂರು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ವತಿಯಿಂದ ಕೇವಲ 60 ಮಂದಿ ಮಾತ್ರ ಶಾಸಕರು ಪಾಲ್ಗೊಂಡಿದ್ದರು. ಉಳಿದ ಸುಮಾರು 100 ಕ್ಕೂ ಹೆಚ್ಚು ಶಾಸಕರು ವಿಧಾನಸೌಧದತ್ತ ಮುಖವನ್ನೇ ಮಾಡಿರಲಿಲ್ಲ.ಅಷ್ಟರ ಮಟ್ಟಿಗೆ ಕೊರೊನಾ ಹಾವಳಿಯ ಭೀತಿ ಅವರಿಸಿತ್ತು.
ಸದನ ಆರಂಭವಾಗಿ ಒಂದು ಗಂಟೆ ಕಳೆದರೂ ಬಹುತೇಕ ಶಾಸಕರು ಆಗಮಿಸಿರಲಿಲ್ಲ. ಆಡಳಿತ ಮತ್ತು ವಿಪಕ್ಷ ಕುರ್ಚಿಗಳು ಖಾಲಿ ಖಾಲಿ ಕಾಣಿಸುತ್ತಿದ್ದವು. ವಿಶೇಷವಾಗಿ ಆಡಳಿತಾರೂಢ ಬಿಜೆಪಿಯ ಬಹುತೇಕ ಸಚಿವರು ಹಾಗೂ ಶಾಸಕರು ಸದನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚಕ್ಕರ್ ಹೊಡೆದಿದ್ದರು. ಬೆಳಗ್ಗೆ 11ಕ್ಕೆ ಆರಂಭವಾಯಿತು. ಪ್ರತಿ ಬಾರಿ ಅಧಿವೇಶನ ಶುರುವಾಗುತ್ತಿದ್ದ ಸಮಯದಲ್ಲಿ ವಿಧಾನಸೌಧ ಗಿಜಿಗುಡುತ್ತಿತ್ತು. ಆದರೆ, ಈ ಬಾರಿ ಬಹುತೇಕ ಜನಪ್ರತಿನಿಧಿಗಳು ಗೈರಾಗಿದ್ದಾರೆ.
ಗೃಹಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವಥ್ ನಾರಾಯಣ್ ಸೇರಿದಂತೆ 50ಕ್ಕೂ ಹೆಚ್ಚು ಶಾಸಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಐಸೋಲೇಷನ್ನಲ್ಲಿz್ದÁರೆ. ಇನ್ನು ಸೋಂಕಿನ ಭೀತಿ ಹಿನ್ನೆಲೆಯಲ್ಲಿ 70 ವರ್ಷ ಮೇಲ್ಪಟ್ಟ ಶಾಸಕರು ಸದನಕ್ಕೆ ಗೈರಾಗಿದ್ದಾರೆ. ಸಾರ್ವಜನಿಕರು, ಶಾಸಕರ ಪಿಎ ಮತ್ತು ಗನ್ ಮ್ಯಾನ್ಗಳಿಗೆ ವಿಧಾನಸಭಾ ಅಧಿವೇಶನಕ್ಕೆ ಪ್ರವೇಶ ಇಲ್ಲ. ಹಾಗಾಗಿ ಈ ಬಾರಿಯ ಸದನ ಖಾಲಿ ಖಾಲಿ ಎನಿಸುತ್ತಿದೆ.
ಡಿಸಿಎಂ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಗೋಪಾಲಯ್ಯ, ಬೈರತಿ ಬಸವರಾಜು, ಉಮಾನಾಥ್ ಕೋಟ್ಯಾನ್, ಎಂ.ಪಿ.ಕುಮಾರಸ್ವಾಮಿ, ಎಸ್.ಆರ್. ವಿಶ್ವನಾಥ್, ಪ್ರಭು ಚೌವ್ಹಾಣ್, ಶಶಿಕಲಾ ಜೊಲ್ಲೇ, ಎಚ್.ಪಿ. ಮಂಜುನಾಥ, ಬಿ.ನಾರಾಯಣ ರಾವ್, ಡಿ.ಎಸ್. ಹುಲಗೇರಿ, ಬಸನಗೌಡ ದದ್ದಲ್, ಪ್ರಿಯಾಂಕ ಖರ್ಗೆ, ಕುಸುಮಾ ಶಿವಳ್ಳಿ, ಬಿ.ಕೆ. ಸಂಗಮೇಶ, ವೆಂಕಟರಾವ್ ನಾಡಗೌಡ, ಡಿ.ಸಿ.ಗೌರಿಶಂಕರ್, ಕೆ.ಮಹದೇವ್ ಅವರುಗಳು ಸದ್ಯ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು ಐಸೋಲೇಷನ್ನಲ್ಲಿz್ದÁರೆ. ಇವರ್ಯಾರೂ ಕಲಾಪಕ್ಕೆ ಹಾಜರಾಗಿಲ್ಲ.