ಹೊಸದಿಲ್ಲಿ: ಭಾರತ-ಚೀನಾ ಗಡಿ ತಕರಾರು ಹಾಗೂ ಯೋಧರ ನಡುವಿನ ಹಿಂಸಾತ್ಮಕ ಘರ್ಷಣೆ ಕುರಿತು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ನಿರಂತರ ತರಾಟೆಗೆ ತೆಗೆದುಕೊಳ್ಳುತ್ತಿದ್ದು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.
ರಾಹುಲ್ ಗಾಂಧಿ, ಮತ್ತೆ ಕೇಂದ್ರ ಸರ್ಕಾರಕ್ಕೆ ಗಡಿ ಘರ್ಷಣೆ ಕುರಿತು ಮೂರು ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಮುಖವಾಗಿ ರಾಷಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ನಡುವಿನ ದೂರವಾಣಿ ಸಂಭಾಷಣೆ ಬಳಿಕ ಗಲ್ವಾನ್ ವ್ಯಾಲಿಯಿಂದ ಚೀನಾ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ. ಭಾರತ ಕೂಡ ತನ್ನ ತುಕಡಿಗಳಿಗೆ ಹಿಂದೆ ಹೆಜ್ಜೆ ಇಡುವಂತೆ ಸೂಚಿಸಿದೆ.
ಇದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.
1. ಗಡಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಚೀನಾವನ್ನೇಕೆ ಒತ್ತಾಯಿಸಿಲ್ಲ?
2. ನಮ್ಮ ಭೂಪ್ರದೇಶವನ್ನು ಅತಿಕ್ರಮಣ ಮಾಡಿ 20 ನಿರಾಯುಧ ವೀರ ಸೈನಿಕರನ್ನು ಹತ್ಯೆ ಮಾಡಿದ ಚೀನಾಗೆ, ಈ ಕ್ರಮವನ್ನು ಸಮರ್ಥಿಸಿಕೊಳ್ಳಲು ಏಕೆ ಅವಕಾಶ ನೀಡಲಾಯಿತು?
3. ಗಲ್ವಾನ್ ಕಣಿವೆಯ ಸಾರ್ವಭೌಮತ್ವದ ಕುರಿತು ಭಾರತ ಉಲ್ಲೇಖವನ್ನೇಕೆ ಮಾಡಿಲ್ಲ?
ಹೀಗೆ ಗಡಿ ಘರ್ಷಣೆ ಕುರಿತು ಕೇಂದ್ರ ಸರ್ಕಾರಕ್ಕೆ ಮೂರು ಪ್ರಶ್ನೆಗಳನ್ನು ಕೇಳಿರುವ ರಾಹುಲ್ ಗಾಂಧಿ, ಸರ್ಕಾರ ಸಮಸ್ಯೆ ಇತ್ಯರ್ಥಕ್ಕಾಗಿ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.