ಹಾಸನ: ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಗಂಡ ಬರ್ಬರವಾಗಿ ಹತ್ಯೆ ಮಾಡಿದ ಭಯಾನಕ ಘಟನೆ ಹೊಳೆನರಸೀಪುರದಲ್ಲಿ ಶನಿವಾರ ಸಂಭವಿಸಿದೆ.
ಪತ್ನಿ ಚೈತ್ರಾಳನ್ನು ಕೊಂದದ ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್.
ಅಮಾನುಷವಾಗಿ ಪತ್ನಿಯ ಕತ್ತು ಪರಾರಿಯಾಗಲು ಯತ್ನಿಸಿದ್ದ ಶಿವಕುಮಾರ್ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಹೊನಮಾರನಹಳ್ಳಿ ಗ್ರಾಮದ ಚೈತ್ರಾಳನ್ನು 7 ವರ್ಷದ ಹಿಂದೆ ಶಿವಕುಮಾರ್ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡೂ ಮಕ್ಕಳು ಹೆಣ್ಣು ಎಂಬ ಕಾರಣಕ್ಕೆ ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದ. ಕರೊನಾ ಲಾಕ್ಡೌನ್ ವೇಳೆ ದೊಡ್ಡ ಗಲಾಟೆಯೇ ಆಗಿತ್ತು. ಚೈತ್ರಾಳ ಸರ, ಕಿವಿಯೋಲೆ ಕಿತ್ತುಕೊಂಡು ಹಲ್ಲೆ ಮಾಡಿದ್ದ.
ಅವನ ಕಾಟ ತಾಳಲಾರದೆ ಚೈತ್ರಾ ತವರು ಮನೆಯಲ್ಲೇ ಇದ್ದಳು… ಈಗ ಅವಳನ್ನೇ ಕೊಂದು ಹಾಕಿಬಿಟ್ಟ, ಪುಟ್ಟ ಮಕ್ಕಳಿಗೆ ತಾಯಿ ಇಲ್ಲದಂಗೆ ಮಾಡಿಬಿಟ್ಟ ಎಂದು ಚೈತ್ರಾಳ ಚಿಕ್ಕಮ್ಮ ಆಸ್ಪತ್ರೆಯ ಶವಾಗರಾದ ಬಳಿ ಗೋಳಾಡುತ್ತಿದ್ದರೆ ಅವರ ಕಂಕುಳಲ್ಲೇ ಕುಳಿತ್ತಿದ್ದ ಚೈತ್ರಾಳ ಮಗಳು ಅಜ್ಜಿ ಕೆನ್ನೆ ಹಿಡಿದು ಏನಾಯ್ತವ್ವ ಎಂಬಂತೆ ನೋಡುತ್ತಿದ್ದ ದೃಶ್ಯ ಕರಳುಹಿಂಡುವಂತಿತ್ತು.
ಗಂಡನಿಂದ ಜೀವನಾಂಶ ಕೋರಿ ಚೈತ್ರಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ಇಂದು ಹೊಳೆನರಸೀಪುರ ಕೋರ್ಟ್ಗೆ ಚೈತ್ರಾ ಆಗಮಿಸಿದ್ದರು.
ಮಧ್ಯಾಹ್ನ 12.30ರ ಸುಮಾರಿನಲ್ಲಿ ಕೋರ್ಟ್ ಆವರಣದ ಶೌಚಗೃಹಕ್ಕೆ ಚೈತ್ರಾ ತೆರಳಿದ್ದಾಗ ಹೊಂಚುಹಾಕಿ ಕಾಯುತ್ತಿದ್ದ ಶಿವಕುಮಾರ್, ಆಕೆಯ ಕತ್ತು ಕೊಯ್ದು ಪರಾರಿಯಾಗಲು ಯತ್ನಿಸಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಚೈತ್ರಾಳನ್ನು ಕೂಡಲೇ ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆತರಲಾಯಿತ್ತಾದರೂ ಬದುಕಲಿಲ್ಲ.
ಚೈತ್ರಾಳ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಇನ್ನು ಏನೂ ಅರಿಯದ ಪುಟ್ಟ ಮಕ್ಕಳು ಸಂಬಂಧಿಕರ ಗೋಳಾಟ ನೋಡಿ ಮಂಕಾಗಿದ್ದಾರೆ. ತನ್ನ ತಾಯಿ ಬಾರದ ಲೋಕಕ್ಕೆ ಹೋಗಿದ್ದಾಳೆ ಎಂಬುದರ ಪರಿವೆಯೂ ಇಲ್ಲದ ಮಕ್ಕಳ ಸ್ಥಿತಿಯನ್ನ ನೋಡಿ ಜನ ಮತ್ತಷ್ಟು ಭಾವುಕರಾಗಿದ್ದಾರೆ.