ಬೆಂಗಳೂರು: ಮೋದಿಯವರ ಸರ್ಕಾರ ಜನದ್ರೋಹಿಯಾದ ಮತ್ತು ದೇಶದ್ರೋಹಿಯೂ ಆದ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ-2022 ನ್ನು ಲೋಕಸಭೆಯಲ್ಲಿ ಮಂಡಿಸಿ, ಅಂಬಾನಿ, ಅದಾನಿ ಮುಂತಾದ ಉದ್ಯಮಿಗಳ ಕೈಗೆ ಚಿನ್ನದ ಖಜಾನೆಗಳನ್ನೆ ಕೊಡಲು ಹೊರಟಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ್ದು, ವಿದ್ಯುತ್ ಕ್ಷೇತ್ರವು ನಮ್ಮ ಸಂವಿಧಾನದ 7ನೇ ಶೆಡ್ಯೂಲ್ನಲ್ಲಿ ಸಮವರ್ತಿ ಪಟ್ಟಿಯಲ್ಲಿರುವ ಕಾರಣದಿಂದ ಇದರಲ್ಲಿ ಯಾವುದೆ ತಿದ್ದುಪಡಿ ತರಬೇಕಾದರೆ ರಾಜ್ಯಗಳ ಸಹಮತಿ ಕಡ್ಡಾಯ ಕುರಿತು ಶಾಸನಸಭೆಗಳಲ್ಲಿ ಚರ್ಚೆ ನಡೆಯಬೇಕು. ಆದರೆ ಕೇಂದ್ರ ಸರ್ಕಾರ ಒಕ್ಕೂಟ ತತ್ವಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರಗಳಿಗೆ ಯಾವ ಮನ್ನಣೆಯನ್ನೂ ನೀಡದೆ ತಿದ್ದುಪಡಿ ತರಲು ಹೊರಟಿದೆ.
ಜೊತೆಗೆ ಜನರ ಬದುಕಿನ ಮೇಲೆ ಪ್ರಭಾವ ಬೀರುವ ಯಾವುದೇ ಕಾಯ್ದೆಯ ಕುರಿತು ವ್ಯಾಪಕವಾಗಿ ಚರ್ಚೆ ಮಾಡಬೇಕು. ಆದರೆ ದೇಶವನ್ನು ಕೋವಿಡ್ ರೋಗವು ಬಾಧಿಸುತ್ತಿದ್ದಾಗ ಕರಡನ್ನು ಬಿಡುಗಡೆ ಮಾಡಿದ ಮೋದಿ ಸರ್ಕಾರ ಈಗ ಏಕಾಏಕಿ ಕಾಯ್ದೆಯನ್ನು ಸಂಸತ್ತಿನ ಮುಂದೆ ಮಂಡಿಸಿದೆ.
ದೇಶದ ಜನರನ್ನು ಸಂಪೂರ್ಣವಾಗಿ ನಾಶಮಾಡುವ ಏಕೈಕ ಗುರಿ ಬಿಜೆಪಿ ಇದ್ದಂತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇದುವರೆಗೆ ಕಡು ಬಡವರ ಬದುಕಿಗೆ ಕೊಳ್ಳಿ ಇಡುತ್ತಿದ್ದ ಇವರು ಈಗ ನಗರ, ಗ್ರಾಮೀಣ ಭಾಗದ ಮಧ್ಯಮ ವರ್ಗ, ಮೇಲ್ ಮಧ್ಯಮವರ್ಗದವರ ಕುತ್ತಿಗೆಗೂ ನೇಣಿನ ಕುಣಿಕೆ ಬಿಗಿಗೊಳಿಸಲು ಹೊರಟಿದ್ದಾರೆ. ಇದರ ಭಾಗವಾಗಿಯೆ ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಒಪ್ಪಿಸಲು ಹೊರಟಿದೆ ಎಂದಿದ್ದಾರೆ.