ಬೆಂಗಳೂರು: ಆ್ಯಸಿಡ್ ಎರಚಿದ ಆರೋಪಿ ಕುಟುಂಬ ಬೀದಿಗೆ ಬರಬಾರದು, ಅವನನ್ನು ಬಿಟ್ಟುಬಿಡುವಂತೆ ಚೆನ್ನಮ್ಮ ಹೇಳಿದ್ದರು ಎಂದು ವಕೀಲ ಚಂದ್ರಮೌಳಿಯವರು ನೆನೆದು ಭಾವುಕರಾಗಿದ್ದಾರೆ.
ಬೆಂಗಳೂರಿನಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಚೆನ್ನಮ್ಮ ಅವರನ್ನು ನೆನೆದು ಭಾವುಕರಾದರು. ಆ್ಯಸಿಡ್ ಎರಚಿದ ಆರೋಪಿಗೆ ಶಿಕ್ಷೆ ಆಗಬಾರದು ಎಂದು ಚೆನ್ನಮ್ಮ ಅವರು ದೇವೇಗೌಡರ ಬಳಿ ಮನವಿ ಮಾಡಿದ್ದರಂತೆ. ನನ್ನ ಪೂರ್ವಜನ್ಮದ ಪಾಪ ಈ ರೀತಿ ಆಗಿದೆ. ಇದರಿಂದ ಅವನ ಕುಟುಂಬ ಬೀದಿಗೆ ಬರಬಾರದು ಎಂದಿದ್ದರು ಎಂದು ನೆನಪನ್ನು ಮೆಲಕು ಹಾಕಿದರು.
25 ವರ್ಷಗಳ ಹಿಂದೆ ಶಿವ ದೇವಸ್ಥಾನಕ್ಕೆ ಚೆನ್ನಮ್ಮ, ಭವಾನಿ ರೇವಣ್ಣ ಪೂಜೆ ಹೋಗುತ್ತಿದ್ದರು. ದೇವಸ್ಥಾನಕ್ಕೆ ಹೋದಾಗ ದೇವೇಗೌಡರ ಸಹೋದರ ಬಸವನೇಗೌಡ ಅವರ ಮಗ ಲೋಕೇಶ್, ಆಸ್ತಿ ಹಾಗೂ ರಾಜಕೀಯ ವಿಚಾರಕ್ಕೆ ಆ್ಯಸಿಡ್ ಎರಚಿದ್ದ.
ಆರೋಪಿ ಹೂವಿನ ಅಡಿ ಆ್ಯಸಿಡ್ ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗಿದ್ದ. ಪೂಜೆ ಮಾಡಿ ವಾಪಸ್ ಬರುವಾಗ ಆಸಿಡ್ ದಾಳಿ ಮಾಡಿದ್ದ. ಈ ದಾಳಿಯಿಂದ ಚೆನ್ನಮ್ಮನವರ ಆರೋಗ್ಯದ ಮೇಲೆ ತೀವ್ರಪರಿಣಾಮ ಬೀರಿತ್ತು. ದೇಹದ ಮೇಲೆ ಸುಮಾರು 40% ಹಾನಿಯಾಗಿತ್ತು. ಎಸ್.ಎಂ ಕೃಷ್ಣ ಅವರು ಈ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದರು. ಭದ್ರತೆ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
Laxmi News 24×7