ಬೆಂಗಳೂರು: ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಖ್ಯಾತಿಯ ನಟ ದರ್ಶನ್ ಅವರ ‘ಕ್ರಾಂತಿ’ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಮಧ್ಯೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅವರ ಹೊಸ ಚಿತ್ರವೊಂದರ ಮುಹೂರ್ತ ಸದ್ದಿಲ್ಲದೆ ನೆರವೇರಿದೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಹೊಸ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಲಿದ್ದಾರೆ.
ಸ್ಯಾಂಡಲ್ವುಡ್ಗೆ ‘ಕನಸಿನ ರಾಣಿ’ಯ ಪುತ್ರಿಯ ಎಂಟ್ರಿ!.
ಜೊತೆಗೆ ನಾಯಕಿಯಾಗಿ ‘ಕನಸಿನ ರಾಣಿ’ ಮಾಲಾಶ್ರೀ ಪುತ್ರಿ ಸ್ಕ್ರೀನ್ ಶೇರ್ ಮಾಡಲಿದ್ದು, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ ನಟಿ ಮಾಲಾಶ್ರೀಯವರ ಮಗಳು ರಾಧನಾ ರಾಮ್ ಈ ಚಿತ್ರದ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲಿದ್ದಾರೆ. ಖ್ಯಾತ ನಿರ್ಮಾಪಕ ದಿವಂಗತ ರಾಮುರವರ ಪುತ್ರಿ ದರ್ಶನ್ ಜೊತೆಗೆ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ವಿಶೇಷವಾಗಿದೆ.ಇನ್ನು ತಮ್ಮ ಮಗಳು ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿರುವ ನಟಿ ಮಾಲಾಶ್ರೀ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ನನ್ನ ಮುದ್ದಿನ ಮಗಳು ಇಂದು ನನಗೆ ಅಪಾರ ಪ್ರೀತಿ ಹಾಗೂ ಬದುಕು ನೀಡಿದ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ… ನನಗೆ ನೀಡಿದ ಪ್ರೀತಿ ಮತ್ತು ಆಶೀರ್ವಾದ ಅವಳ ಮೇಲೂ ಇರಲಿ ಎಂದು ಆಶಿಸುತ್ತೇನೆ’ ಎಂದು ಮನವಿ ಮಾಡಿಕೊಂಡಿದ್ದಾರೆ.