ಬೆಂಗಳೂರು: ದಾವಣಗೆರೆಯಲ್ಲಿ ಬುಧವಾರ (ಆಗಸ್ಟ್ 3) ನಡೆಯಲಿರುವ ಸಿದ್ದರಾಮಯ್ಯ-75 ‘ಅಮೃತ ಮಹೋತ್ಸವ’ ಸಂಭ್ರಮಕ್ಕೆ ಅಮೃತ ಮಹೋತ್ಸವ ಸಮಿತಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರ ಹರಿದು ಬರಬಹುದೆಂಬ ನಿರೀಕ್ಷೆ ಸಮಿತಿಯದ್ದಾಗಿದೆ.
ಸಮಾವೇಶದ ನೆಪದಲ್ಲಿ ಸಿದ್ದರಾಮಯ್ಯ ಅವರ ಆಡಳಿತ ಅವಧಿಯ ಜನಪರ ಯೋಜನೆಗಳನ್ನು ನೆನಪಿಸುತ್ತಲೇ, ಕೇಂದ್ರ- ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಸಿದ್ಧತೆ ನಡೆದಿದೆ. ಕಾರ್ಯಕ್ರಮದ ಅಂತಿಮ ರೂಪರೇಷೆಗಳ ಕುರಿತು ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಮಿತಿ ಪದಾಧಿಕಾರಿಗಳಾದ ಆರ್.ವಿ. ದೇಶಪಾಂಡೆ, ಬಸವರಾಜ ರಾಯರಡ್ಡಿ, ಈಶ್ವರ ಖಂಡ್ರೆ, ಎಚ್.ಎಂ. ರೇವಣ್ಣ, ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್, ಅಜಯ್ ಸಿಂಗ್ ಮತ್ತಿತರರು ಚರ್ಚೆ ನಡೆಸಿದರು.
ಸಿದ್ದರಾಮಯ್ಯ ಅವರು ಮಂಗಳವಾರ ಮಧ್ಯಾಹ್ನವೇ ಹುಬ್ಬಳ್ಳಿಗೆ ತೆರಳಲಿದ್ದು, ರಾತ್ರಿ 8 ಗಂಟೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರ ಎಂಟು ವರ್ಷಗಳ ಆಡಳಿತದಲ್ಲಿನ ವೈಫಲ್ಯಗಳ ಕುರಿತು ಕಾಂಗ್ರೆಸ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ ‘ವರುಷ ಎಂಟು ಅವಾಂತರ ನೂರೆಂಟು’ ಕಿರು ಹೊತ್ತಿಗೆಯನ್ನು ಮರುಮುದ್ರಿಸಿ ಅಮೃತ ಮಹೋತ್ಸವ ಹಂಚಲು ಸಮಿತಿ ಮುಂದಾಗಿದೆ. ಹೀಗಾಗಿ, ಎರಡು ಲಕ್ಷಕ್ಕೂ ಹೆಚ್ಚು ಪ್ರತಿಗಳನ್ನು ಮರುಮುದ್ರಿಸಲಾಗಿದೆ’ ಎಂದು ಸಮಿತಿಯ ಮೂಲಗಳು ತಿಳಿಸಿವೆ.
10 ಲಕ್ಷ ಜನರು ಸೇರುವ ನಿರೀಕ್ಷೆ