ಬೆಂಗಳೂರು :ಸಣ್ಣ ಮತ್ತು ಅತಿಸಣ್ಣ ರೈತರ ಅನುಕೂಲಕ್ಕಾಗಿ ಜಾರಿಯಾಗಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೂರಾರು ಕೋಟಿ ರೂ. ಅನರ್ಹರ ಪಾಲಾಗಿರುವುದು ಬೆಳಕಿಗೆ ಬಂದಿದೆ. ಅಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಗುತ್ತಿಗೆ ನೌಕರರು ಶಾಮೀಲಾಗಿದ್ದು, ಅಂಥವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ಗಳು ದಾಖಲಾಗಿವೆ.
ಕರ್ನಾಟಕದಲ್ಲಿ 2.40 ಲಕ್ಷ ಅಪಾತ್ರರ ಖಾತೆಗಳಿಗೆ ಸಹಾಯಧನ ವರ್ಗಾ ವಣೆಯಾಗಿದೆ. ಈಗಾಗಲೇ ಖಾತೆದಾರರಿಗೆ ಕೃಷಿ ಇಲಾಖೆ ನೋಟಿಸ್ ಜಾರಿಗೊಳಿಸಿದ್ದು, ಅಕ್ರಮವಾಗಿ ಸ್ವೀಕರಿಸಿರುವ ಸಹಾಯಧನ ವಾಪಸ್ ಕೊಡುವಂತೆ ಸೂಚಿಸಲಾಗಿದೆ. ಪಾವತಿ ಮಾಡದಿದ್ದರೆ ಈಗ ಪಡೆಯುತ್ತಿರುವ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ. ನಂತರ 1.21 ಕೋಟಿ ರೂ. ಸರ್ಕಾರಕ್ಕೆ ಮರು ಪಾವತಿಯಾಗಿದೆ. ಸದ್ಯ ಕರ್ನಾಟಕ, ತಮಿಳುನಾಡು, ರಾಜಸ್ಥಾನ ಮತ್ತು ಗುಜರಾತ್ನಲ್ಲಿ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ತಮಿಳುನಾಡಲ್ಲಿ 8.5 ಲಕ್ಷ ಅನರ್ಹರ ಖಾತೆಗಳಿಗೆ ಸಹಾಯಧನ ಜಮೆಯಾಗಿದ್ದು, ಅತಿಹೆಚ್ಚು ವಂಚನೆ ಪ್ರಕರಣಗಳು ದಾಖಲಾದ ರಾಜ್ಯವಾಗಿದೆ. ತಮಿಳುನಾಡಲ್ಲಿ ಬರೋಬ್ಬರಿ 163 ಕೋಟಿ ರೂ. ಮರುವಸೂಲಿ ಮಾಡಲಾಗಿದೆ. ರಾಜಸ್ಥಾನದಲ್ಲಿ 3.6 ಲಕ್ಷ ಹಾಗೂ ಗುಜರಾತ್ನಲ್ಲಿ 41.76 ಲಕ್ಷ ರೂ. ವಸೂಲಿ ಮಾಡಲಾಗಿದೆ.
ಆರ್ಟಿಐ ಅರ್ಜಿಗೆ ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ದೇಶಾದ್ಯಂತ 11.37 ಕೋಟಿ ರೈತರು ಫಲಾನುಭವಿಗಳ ಪಟ್ಟಿಯಲ್ಲಿದ್ದಾರೆ. ಇದರಲ್ಲಿ 58.08 ಲಕ್ಷ ಮಂದಿ ರೈತರ ಹೆಸರಿನಲ್ಲಿ ಸಹಾಯಧನ ಪಡೆಯುತ್ತಿರುವ ಅನರ್ಹರಾಗಿದ್ದಾರೆ. 58.08 ಲಕ್ಷ ಅನರ್ಹ ರೈತರಲ್ಲಿ 13.73 ಲಕ್ಷ ಮಂದಿ ಆದಾಯ ತೆರಿಗೆ ಪಾವತಿದಾರರಾಗಿದ್ದು, ಸುಳ್ಳು ಮಾಹಿತಿ ಕೊಟ್ಟು ಸಹಾಯಧನಕ್ಕೆ ನೋಂದಣಿ ಮಾಡಿಸಿದ್ದಾರೆ. ಉಳಿದವರು ರೈತರೇ ಅಲ್ಲದಿದ್ದರೂ ಕಳ್ಳದಾರಿಯಲ್ಲಿ ನೋಂದಣಿ ಮಾಡಿಸಿ ಸಹಾಯಧನ ಪಡೆದುಕೊಂಡಿದ್ದು, ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸುವ ಕಾರ್ಯ ಪ್ರಗತಿಯಲ್ಲಿದೆ.
ವಂಚನೆ ತಡೆಗೆ ಹೊಸ ನಿಯಮ: ಲಾಗಿನ್ ಐಡಿ ದುರ್ಬಳಕೆ ಮಾಡಿಕೊಂಡು ಅರ್ಹರಲ್ಲದವರನ್ನೂ ಸಹಾಯಧನಕ್ಕೆ ಸ್ವಯಂ ನೋಂದಣಿ ಮಾಡಿರುವುದು ಬಹುತೇಕ ಕಡೆ ದೃಢಪಟ್ಟಿದೆ. ಹೀಗಾಗಿ ಲಾಗಿನ್ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ಸರ್ಕಾರಿ ಇ ಮೇಲ್ ಐಡಿ ಹಾಗೂ ಮೊಬೈಲ್ ಎರಡರಲ್ಲೂ ಓಟಿಪಿ ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.