ಸವದತ್ತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಹೇಳಲು ಆಗಲ್ಲ. ಜನವರಿ ನಂತರ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ಸ್ಪಷ್ಟವಾಗಲಿದೆ. ಜನವರಿ ನಂತರ ರಾಜ್ಯದಲ್ಲಿ ಬದಲಾವಣೆ ಪರ್ವ ಆರಂಭವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯ ಡಿಸಿ ಕಚೇರಿ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಸವದತ್ತಿಯಲ್ಲಿ ಯಾವುದೇ ಗೊಂದಲ ಇಲ್ಲ, ಎಲ್ಲಾ ಕ್ಲಿಯರ್ ಇದೆ. ಸವದತ್ತಿಯಲ್ಲಿ ಗ್ರೌಂಡ್ ಸಿದ್ಧಪಡಿಸುತ್ತಿದ್ದೇವೆ. ಸ್ಥಳೀಯರು ಮತ್ತು ಬೇರೆಯವರು ನಿಲ್ಲುವುದು ಪ್ರಶ್ನೆ ಅಲ್ಲ. ಆದರೆ ಸ್ಥಳೀಯರಿಗೆ ನಿಲ್ಲಲು ಅವಕಾಶವಿದೆ. ನೀವು ಯಾರಾದ್ರೂ ಒಬ್ಬರು ನಿಲ್ಲುವಂತೆ ನಾವು ಹೇಳಿದ್ದೇವೆ. ಯಾರೇ ನಿಂತರೂ ನಾವು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ಇನ್ನು ಸಿದ್ದರಾಮಯ್ಯ ಹಾಗೂ ತಾವು ಸ್ಪರ್ಧಿಸುತ್ತಿರಾ ಎಂಬ ಬಗ್ಗೆ ಅಂತಹ ವಿಚಾರಗಳು ಸಧ್ಯಕ್ಕೆ ಇಲ್ಲ. ಮುಂದೆ ಏನಾಗುತ್ತದೆ ಅಂತಾ ಹೇಳಲು ಆಗೋದಿಲ್ಲ. ಈಗ ನಾವು ಕಾಂಗ್ರೆಸ್ ಪಕ್ಷದ ನೆಲ ಗಟ್ಟಿ ಮಾಡಲು ಓಡಾಡುತ್ತಿದ್ದೇವೆ.
ಮೊದಲ ಆಧ್ಯತೆ ಸ್ಥಳೀಯರಿಗೆ. ಅವರು ಹೊಂದಾಣಿಕೆ ಮಾಡಿಕೊಂಡರೆ ಯಾವುದೇ ತೊಂದರೆ ಇಲ್ಲ. ರಾಜಕೀಯ ಸನ್ನಿವೇಶ ಜನವರಿ ನಂತರ ಬದಲಾಗುವ ಸಾಧ್ಯತೆಯಿದೆ. ಸವದತ್ತಿಯಲ್ಲಿ ಈ ಬಾರಿ ನಾವು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದರು.
ಒಟ್ಟಿನಲ್ಲಿ ಜನವರಿ ನಂತರ ಸವದತ್ತಿಯಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಸ್ಪಷ್ಟ ನಿರ್ಧಾರ ಹೊರ ಬರಲಿದೆ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.