ಇದು ರಾಜ್ಯದಲ್ಲಿಯೇ ಎರಡನೇ ಅತೀದೊಡ್ಡದಾದ ಸರ್ಕಾರಿ ITI ಕಾಲೇಜು. ಆದ್ರೆ ಇಲ್ಲಿ ಸೌಕರ್ಯಗಳು ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕತ್ತಲಿನಲ್ಲೇ ಪಾಠ ಕಲಿಯುವಂತಹ ವ್ಯವಸ್ಥೆ ನಿರ್ಮಾಣವಾಗಿದೆ.
ಹೌದು ಒಂದೆಡೆ ಶಿಥಿಲಾವಸ್ಥೆ ತಲುಪಿರುವ ಕಟ್ಟಡ, ಆ ಕಟ್ಟಡದೊಳಗೆ ಆತಂಕದಲ್ಲಿ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳು. ಇಷ್ಟೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯ ವಿದ್ಯಾನಗರದ ಸರ್ಕಾರಿ ಕೈಗಾರಿಕಾ ತರಭೇತಿ ಸಂಸ್ಥೆಯ ದುಸ್ಥಿತಿ ಇದು. ಅಂದಹಾಗೇ 1957 ರಲ್ಲಿ ಪ್ರಾರಂಭವಾದ ಈ ಕಾಲೇಜು, ಅಂದಿನಿಂದ ಇಂದಿನವರೆಗೂ ವಿದ್ಯಾರ್ಥಿಗಳಿಗೆ ನಿರಂತರವಾಗಿ ತಾಂತ್ರಿಕ ಶಿಕ್ಷಣ ನೀಡುತ್ತಾ ಬರುತ್ತಿದೆ. ಆದರೆ ಕಾಲಾನುಕ್ರಮದಲ್ಲಿ ಕಟ್ಟಡ ಶಿಥಿಲಾವಸ್ತೆ ತಲುಪುತ್ತಿದೆ.
ಇತ್ತಿಚೆಗೆ ಸುರಿದ ಗಾಳಿ ಮಳೆಗೆ ಕಾರ್ಯಗಾರದ ಕೆಲವೆಡೆ ಮೇಲ್ಛಾವಣಿ ಹಾರಿ ಹೋಗಿದೆ. ಕಿಟಕಿ ಗಾಜುಗಳು ಒಡೆದು ಮಳೆ ಬಂದಾಗ ಮಳೆ ನೀರು ಕಾರ್ಯಾಗಾರಕ್ಕೆ ನುಗ್ಗುತ್ತಿವೆ. ಪರಿಣಾಮವಾಗಿ ವಿದ್ಯಾರ್ಥಿಗಳು ಪ್ರಾಯೋಗಿಕ ತರಭೇತಿ ಮಾಡುತ್ತಿದ್ದಾಗ ಯಂತ್ರಗಳು ಕೈಕೊಡುತ್ತಿವೆಯಂತೆ.
ಒಟ್ಟು 1200 ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಇವರಿಗೆ ಸರಿಯಾದ ಸುಸಜ್ಜಿತ ಕಟ್ಟಡಗಳಿಲ್ಲದೇ ಹಳೆಯ 12 ಕೊಠಡಿಗಳಲ್ಲಿ ಪಾಠಗಳನ್ನು ಮಾಡಲಾಗುತ್ತಿದೆ. ಇಷ್ಟೇ ಅಲ್ಲದೇ ಕಾಲೇಜಿನಲ್ಲಿ ಸುಸಜ್ಜಿತ ಸಭಾಂಗಣ, ಉಪನ್ಯಾಸಕರ ವಿಶ್ರಾಂತಿ ಕೊಠಡಿ, ಮೈದಾನ, ಕುಡಿಯುವ ನೀರು ಸೇರಿದಂತೆ ಇನ್ನಿತರ ನೂನ್ಯತೆಗಳನ್ನು ಎದುರಿಸುತ್ತಿದೆ. ಕಾಲೇಜು ಸರಿಯಾದ ಮುಖ್ಯರಸ್ತೆಯೂ ಇಲ್ಲದಾಗಿದೆ. ಪರಿಣಾಮವಾಗಿ ಸಮಸ್ಯೆಗಳ ಸುರಿಮಳೆಯಲ್ಲಿದ್ದು, ಕೂಡಲೇ ಕಾಲೇಜಿಗೆ ಕಾಯಕಲ್ಪದ ಅನಿವಾರ್ಯತೆ ಎದುರಾಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಕಾಲೇಜು ಆಡಳಿತ ಮಂಡಳಿ ಸರ್ಕಾರಕ್ಕೆ ತಿಳಿಸಿದೆ.