ಮುಂಬೈ: ಮಹಾರಾಷ್ಟ್ರ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಎಳ್ಳುನೀರು ಬಿಡುವ ಕಾಲ ಸನ್ನಿಹಿತವಾಗ್ತಿದೆ. ಏಕನಾಥ್ ಶಿಂಧೆಯ ಬಂಡಾಯದ ಬಲೆಗೆ ಮಹಾ ವಿಕಾಸ್ ಅಘಾಡಿ ಪತರುಗುಟ್ಟಿದೆ. ಈ ಮಧ್ಯೆ ರೆಬೆಲ್ ಶಾಸಕರ ವಿರುದ್ಧ ಕಾನೂನು ಸಮರಕ್ಕೆ ಶಿವಸೇನಾ ಸಜ್ಜಾಗಿದೆ. ಸರ್ಕಾರವನ್ನ ಮುಳುಗಿಸಿ ಗುವಾಹಟಿಯಲ್ಲಿರೋ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ ನಡೆಸ್ತಿದೆ.
ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಬಾಂಬ್ ಫಿಕ್ಸ್ ಮಾಡಿ ಗುವಾಹಟಿ ಹಾರಿ ಏಕನಾಥ್ ಶಿಂಧೆ ಬಣ ಕೇಕೆ ಹಾಕ್ತಿದೆ. ನಮ್ಮದೇ ಶಿವಸೇನೆ ಎಂದು ಶಕ್ತಿ ಪ್ರದರ್ಶಿಸುತ್ತಿದೆ. ಶಿಂಧೆ ಪರ ಬಂಡಾಯ ಶಾಸಕರು ಕುಲ್ಲಂಕುಲ್ಲಾ ಬೆಂಬಲ ಸೂಚಿಸಿದ್ದು, ಸಿಎಂ ಠಾಕ್ರೆ ಕುರ್ಚಿ ಅಲ್ಲಾಡುತ್ತಿದೆ. ಈ ಮಧ್ಯೆ ಮತ್ತಷ್ಟು ರೆಬೆಲ್ ಶಾಸಕರು ಶಿಂಧೆ ಕ್ಯಾಂಪ್ ಸೇರಿದ್ದಾರೆ.
ರೆಬೆಲ್ ಶಾಸಕರ ವಿರುದ್ಧ ಅನರ್ಹತೆಯ ತೂಗುಗತ್ತಿ!
12 ಶಾಸಕರ ಅನರ್ಹಗೊಳಿಸಲು ಶಿವಸೇನಾ ಮನವಿ
ಸಿಎಂ ಉದ್ಧವ್ ಠಾಕ್ರೆ ಸರ್ಕಾರದ ಬುಡಕ್ಕೆ ಬೆಂಕಿ ಇಟ್ಟು ಅಸ್ಸಾಂನ ಹೋಟೆಲ್ನಲ್ಲಿ ಕೂಲ್ ಆಗಿ ಕೂತಿರೋ ಶಾಸಕರಿಗೆ ಸಂಕಷ್ಟ ಎದುರಾಗಿದೆ. ಸರ್ಕಾರವನ್ನ ಉರುಳುವ ಸ್ಥಿತಿಗೆ ತಂದಿರೋ ಶಾಸಕರ ವಿರುದ್ಧ ಕಾನೂನು ಸಮರ ಸಾರಲು ಶಿವಸೇನೆ ಮುಂದಾಗಿದೆ. ಶಿಂಧೆ ಹಿಂದೆ ಹೋಗಿರೋ ಶಾಸಕರ ಮೇಲೆ ಅನರ್ಹತೆಯ ಅಸ್ತ್ರ ಪ್ರಯೋಗಿಸಲು ಠಾಕ್ರೆ ಪಕ್ಷ ಮುಂದಾಗಿದೆ. ಈಗಾಗಲೇ ಏಕನಾಥ್ ಶಿಂಧೆ ಕ್ಯಾಂಪ್ ಸೇರಿರೋ 46 ಮಂದಿ ಶಾಸಕರಲ್ಲಿ 12 ಮಂದಿ ರೆಬೆಲ್ ಶಾಸಕರನ್ನ ಅನರ್ಹಗೊಳಿಸುವಂತೆ ಡೆಪ್ಯೂಟಿ ಸ್ಪೀಕರ್ಗೆ ಮನವಿ ಸಲ್ಲಿಸುತ್ತೇವೆ ಅಂತಾ ಸಂಜಯ್ ರಾವತ್ ಹೇಳಿದ್ದಾರೆ.