ಜೂ.18- ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಸ್ನೇಹಿತರಿಬ್ಬರು ನೀರು ಪಾಲಾಗಿರುವ ಘಟನೆ ತಾಲೂಕಿನ ಹೆಗ್ಗಂದೂರಿನಲ್ಲಿ ನಡೆದಿದೆ.
ಹೆಗ್ಗಂದೂರಿನ ರಮೇಶ್ರಾವ್ ಎಂಬುವವರ ಪುತ್ರ ಶರತ್ರಾವ್ (17) ಹಾಗೂ ಪುಟ್ಟೇಗೌಡರ ಪುತ್ರ ಶಿವಕುಮಾರ್ (17) ಮೃತಪಟ್ಟ ಸ್ನೇಹಿತರು.
ಈ ಇಬ್ಬರು ಹನಗೋಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿಯು ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದರು.
ಕಾಮಗೌಡನಹಳ್ಳಿ ಬಳಿಯ ಲಕ್ಷ್ಮಣತೀರ್ಥ ನದಿಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ಹೋಗಿ ಆಯತಪ್ಪಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಅಗ್ನಿಶಾಮಕದಳ ಹಾಗೂ ಮುಳುಗು ತಜ್ಞರಿಂದ ನದಿಯಲ್ಲಿ ಶೋಧ ನಡೆಸಿದ್ದು, ಶಿವಕುಮಾರ್ ಶವ ಪತ್ತೆಯಾಗಿದ್ದು, ಶರತ್ರಾವ್ ಶವ ಇನ್ನೂ ಪತ್ತೆಯಾಗಿಲ್ಲ.
ರಾತ್ರಿಯಾಗಿದ್ದರಿಂದ ಬೆಳಿಗ್ಗೆ ಶೋಧ ಕಾರ್ಯಾಚರಣೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.