ಕುಂದಾಪುರ : ಕರಾವಳಿ ಜಿಲ್ಲೆಯ ರಾಜಕಾರಣದಲ್ಲಿ ಅಪರೂಪದ ರಾಜಕೀಯ ಚಾಣಾಕ್ಷ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ (ಎ.ಜಿ. ಕೊಡ್ಗಿ) ಅವರು ಅಸೌಖ್ಯದಿಂದ ಸೋಮವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕರಾವಳಿ ಜಿಲ್ಲೆಯ ರಾಜಕಾರಣದಲ್ಲಿ ಅಪರೂಪದ, ರಾಜಕೀಯ ಚಾಣಾಕ್ಷನಾಗಿ ಸುದೀರ್ಘ 56 ವರ್ಷಗಳ ಕಾಲ ತೊಡಗಿಸಿಕೊಂಡು, ತಾನು ಗುರುತಿಸಿಕೊಂಡ ಪಕ್ಷದಲ್ಲಿ ನಿಷ್ಠೆ ಹಾಗೂ ಬದ್ಧತೆಯನ್ನು ತೋರಿಸಿ, ಪಕ್ಷಕ್ಕೆ ತನ್ನ ಆವಶ್ಯಕತೆಯಿಲ್ಲ ಎಂದೆನಿಸಿದಾಗ ರಾಜಕೀಯದ ಪಡಸಾಲೆಯಿಂದ ನಿರ್ಗಮಿಸಿದವರು ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಅವರು.
ಕುಂದಾಪುರ ತಾಲೂಕು ಅಮಾಸೆಬೈಲು ಕೃಷಿಕ ಕುಟುಂಬದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ ಮಚ್ಚಟ್ಟು ಕೃಷ್ಣರಾಯ ಕೊಡ್ಗಿ ಅವರ ಮಗನಾಗಿ 1929ರ ಅ. 1ರಂದು ಕಾರ್ಕಳ ತಾಲೂಕಿನ ಮಂಜರಪಳಿಕೆ ಎಂಬಲ್ಲಿ ಜನಿಸಿದ ಎ.ಜಿ. ಕೊಡ್ಗಿ ವಿದ್ಯಾರ್ಥಿ ಜೀವನದಲ್ಲಿ 1942ರಲ್ಲಿ ಕ್ವಿಟ್ ಇಂಡಿಯಾ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಕಾನೂನು ಪದವಿ ಪಡೆದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಿಟ್ಟೂರು ಶ್ರೀನಿವಾಸ ರಾವ್ ಅವರೊಂದಿಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಕೆಲ ವರ್ಷ ವಕೀಲರಾಗಿ ಕೆಲಸ ನಿರ್ವಹಿಸಿದರು. ಬಳಿಕ ಕೃಷಿಯಲ್ಲಿಯೇ ಪರಿಪೂರ್ಣವಾಗಿ ತೊಡಗಿಸಿಕೊಂಡರು.