ಭಾರೀ ಸಂಚಲ ಮೂಡಿಸಿದ್ದ ಗುಜರಾತ್ ವಡೋದರ ಮೂಲದ ಯುವತಿ ಕ್ಷಮಾ ಬಿಂದು ಕೊನೆಗೂ ತಮ್ಮ ಕನಸನ್ನ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಾಸ್ತ್ರೋಕ್ತವಾಗಿ ನಿನ್ನೆ ತಮ್ಮನ್ನೇ ತಾವು ಮದುವೆ ಆಗಿದ್ದಾರೆ. ಇವರು ಜೂನ್ 11 ರಂದು ಮದುವೆ ಆಗಬೇಕಿತ್ತು, ಹಲವರ ವಿರೋಧ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತ ಮೂರು ದಿನಗಳ ಮುಂಚೆಯೇ ಮದುವೆ ಆಗಿದ್ದಾರೆ.
ಯಾಕೆ ವಿರೋಧ ಆಗಿತ್ತು..?
ಕ್ಷಮಾ ಬಿಂದು ಏಕಾಂಗಿಯಾಗಿ (ತಮ್ಮನ್ನೇ ತಾವು) ವಿವಾಹ ಆಗುತ್ತಿರೋದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಿಂದೂ ಧರ್ಮದಲ್ಲಿ ಅಂತಹ ಮದುವೆಗೆ ಅವಕಾಶವಿಲ್ಲ. ದೇವಸ್ಥಾನದಲ್ಲಿ ಇಂತಹ ಮದುವೆಗಳಿಗೆ ಅವಕಾಶ ನೀಡಬಾರದು. ಇಂತಹ ಮದುವೆಗಳು ವಿದೇಶದಲ್ಲಿ ನಡೆಯುತ್ತಿವೆ. ಅದು ನಮ್ಮ ದೇಶಕ್ಕೆ ಕಾಲಿಡುವುದು ಬೇಡ. ಈ ರೀತಿ ಮದುವೆ ಆಗಬಾರದು ಎಂದು ಕ್ಷಮಾಗೆ ಎಚ್ಚರಿಕೆಯನ್ನ ನೀಡಿದ್ದರು. ವಡೋದರಾದ ಮಾಜಿ ಉಪಮೇಯರ್ ಹಾಗೂ ಬಿಜೆಪಿ ನಾಯಕಿ ಸುನೀತಾ ಶುಕ್ಲಾ ಎಚ್ಚರಿಕೆಯನ್ನ ನೀಡಿದ್ದರು.
ಎಲ್ಲಿ ಮದುವೆ ಆದರು..?
ಇದೀಗ ಕ್ಷಮಾ ಬಿಂದು ತಮ್ಮಿಷ್ಟದಂತೆ ಮದುವೆ ಆಗಿದ್ದು, ಯಾವುದೇ ವರನಿಲ್ಲದೇ ಸಪ್ತಪದಿ ತುಳಿದಿದ್ದಾರೆ. ಇವರ ವಿವಾಹ ಕಾರ್ಯಕ್ರಮಕ್ಕೆ ಸ್ನೇಹಿತರು, ಸಂಬಂಧಿಕರು ಸಾಕ್ಷಿಯಾಗಿದ್ದಾರೆ. ದೇವಾಲಯದಲ್ಲಿ ಮದುವೆ ಆಗಲು ವಿರೋಧ ವ್ಯಕ್ಯವಾದ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲಿಯೇ ಹಿಂದೂ ಸಂಪ್ರದಾಯದ ಪ್ರಕಾರ ತಮ್ಮನ್ನ ತಾವೇ ವರಿಸಿಕೊಂಡಿದ್ದಾರೆ. ಈ ಮದುವೆ ಪುರೋಹಿತರ ಸಮ್ಮುಖದಲ್ಲಿ ನಡೆಯಲಿಲ್ಲ. ಆದರೆ ಹಿಂದೂ ಸಂಪ್ರದಾಯದ ಹಲವು ಶಾಸ್ತ್ರಗಳನ್ನ ಮಾಡಿ ಮದುವೆ ಆಗಿದ್ದಾರೆ. ಇನ್ನು ತನ್ನಿಷ್ಟದಂತೆ ತನ್ನ ಜೊತೆನೇ ಗೋವಾಕ್ಕೆ ಹನಿಮೂನ್ ಹೋಗೋ ಪ್ಲಾನ್ ಒಂದೇ ಈಗ ಬಾಕಿ ಉಳಿದಿದೆ.