ಬೆಳಗಾವಿ: ಪತ್ನಿಯ ಸೀಮಂತಕ್ಕೆಂದು ರಜೆ ಮೇಲೆ ಊರಿಗೆ ತೆರಳುತ್ತಿದ್ದ ಯೋಧ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಸವದತ್ತಿ ತಾಲೂಕಿನ ಹೊಸೂರು ಗ್ರಾಮದ ಯೋಧ ಪ್ರಕಾಶ ಸಂಗೊಳ್ಳಿ (29) ಮೃತರು. ಬೆಳಗಾವಿಯ ಎಂಎಲ್ಐಆರ್ಸಿಯಲ್ಲಿ ಪ್ರಕಾಶ ಅವರು ಕೆಲಸ ಮಾಡುತ್ತಿದ್ದರು.
ಜೂ.5ರಂದು ಪತ್ನಿಯ ಸೀಮಂತ ಕಾರ್ಯಕ್ರಮ ನಿಗದಿಯಾಗಿತ್ತು. ಹಾಗಾಗಿ ರಜೆ ಹಾಕಿ ಗುರುವಾರ ರಾತ್ರಿ ಊರಿಗೆ ಬೈಕ್ನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ, ಗಂಭೀರ ಗಾಯಗೊಂಡ ಯೋಧ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಶುಕ್ರವಾರ ಬೆಳಗ್ಗೆ ಹೊಸೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.