ಬೆಳಗಾವಿ: ಬಸವಣ್ಣನವರ ಅನುಭವ ಮಂಟಪ ಪೀರಭಾಷಾ ಬಂಗ್ಲೆ ಆಗಿದೆ ಎಂದು ಬೆಳಗಾವಿಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಬಸವಣ್ಣನವರ ಅನುಭವ ಮಂಟಪ ಕುರಿತು ಮಾತನಾಡಿದ ಅವರು, ವಿಶ್ವದ ಮೊದಲ ಸಂಸತ್ತು ಬಸವಣ್ಣನವರ ಅನುಭವ ಮಂಟಪ. ಬಸವಣ್ಣನವರ ಮೂಲ ಅನುಭವ ಮಂಟಪ ಪೀರಭಾಷಾ ಬಂಗ್ಲೆಯಾಗಿದೆ. ನಾವೆಲ್ಲ ಇದನ್ನು ನೋಡಿ ಸುಮ್ಮನ್ನೆ ಕುಳಿತುಕೊಂಡರೆ ಹೇಗೆ? ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸರ್ಕಾರ ಅನುಭವ ಮಂಟಪದ ಪೂರ್ತಿ ಜವಾಬ್ದಾರಿ ತೆಗೆದುಕೊಂಡು ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದರು.
ಇವತ್ತು ಸರ್ಕಾರ ಅನುಭವ ಮಂಟಪದ ನಿರ್ಮಾಣಕ್ಕೆ ಸಾಕಷ್ಟು ಖರ್ಚು ಮಾಡುತ್ತಿದ್ದಾರೆ. ಇದನ್ನು ನಾವು ಅಭಿನಂದಿಸಿಬೇಕು. ಆದರೆ ಮೊದಲು ಮೂಲ ಮಂಟಪವನ್ನು ಅಭಿವೃದ್ಧಿ ಮಾಡುವುದು ತುಂಬಾ ಮುಖ್ಯವಲ್ಲವೇ ಎಂದು ಪ್ರಶ್ನೆ ಕೇಳಿದರು.ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಚರ್ಚಿಸಿ ಮೂಲ ಅನುಭವ ಮಂಟಪ ಬಿಟ್ಟುಕೊಡಬೇಕು. ವೀರಶೈವ ಲಿಂಗಾಯತ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ವಿಶೇಷ ಗಮನ ಹರಿಸುತ್ತಿದ್ದಾರೆ. ಎಲ್ಲ ಸ್ವಾಮೀಜಿಗಳನ್ನು ಸೇರಿಸಿ ಜೂನ್ 12 ರಂದು ಅನುಭವ ಮಂಟಪ ಕಡೆಗೆ ಕರೆದೊಯ್ಯುತ್ತಿದ್ದಾರೆ. ಅದಕ್ಕೂ ಮೊದಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು.