ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ದೇವೇಗೌಡ, ಎಸ್.ಎಂ.ಕೃಷ್ಣ ಮತ್ತು ಯಡಿಯೂರಪ್ಪ ಸಹ ದಾವೋಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವ ದೇಶಗಳ ಉದ್ಯೋಗಪತಿಗಳು ಒಂದೆಡೆ ಸೇರುವ ಶೃಂಗಸಭೆಗೆ ಈ ಬಾರಿ ಕೊವೊಡ್ ಹಿನ್ನೆಲೆಯಲ್ಲಿ ಸಾಕಷ್ಟು ಮಹತ್ವವಿತ್ತು ಎಂದು ಹೇಳಿದರು.
ಕೊವಿಡ್ನಿಂದಾಗಿ ಜಾಗತಿಕ ಆರ್ಥಿಕತೆಯು ಹಿಂಜರಿಕೆಯ ಸುಳಿಗೆ ಸಿಲುಕುವ ಅಪಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಶೃಂಗಸಭೆ ಎಲ್ಲರ ಗಮನ ಸೆಳೆದಿತ್ತು. ಭಾರತದ ಆರ್ಥಿಕತೆ ಬಗ್ಗೆ ವಿಶ್ವದ ವಿವಿಧ ದೇಶಗಳ ಪ್ರತಿಕ್ರಿಯೆ ಹೇಗಿರಬಹುದು ಎಂಬ ಕುತೂಹಲ ವ್ಯಕ್ತವಾಗಿತ್ತು. ಹಲವು ದೇಶಗಳ ಪ್ರತಿನಿಧಿಗಳು ಭಾರತಕ್ಕೆ ನೀಡಿದ್ದ ಪ್ರಾಮುಖ್ಯತೆ ಗಮನಿಸಿದಾಗ ಭಾರತವು ನಿಜಕ್ಕೂ ಬೆಳೆಯುತ್ತಿರುವ ಆರ್ಥಿಕತೆ ಎನ್ನುವುದು ಮನವರಿಕೆಯಾಯಿತು. ಚೀನಾದಲ್ಲಿ ಇಂದಿಗೂ ಲಾಕ್ಡೌನ್ ಮುಂದುವರಿಯುತ್ತಿದೆ. ಉಕ್ರೇನ್-ರಷ್ಯಾ ಯದ್ಧದಿಂದ ಹತ್ತಾರು ಸಮಸ್ಯೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಭಾರತದತ್ತ ಕುತೂಹಲದಿಂದ ನೋಡುತ್ತಿದ್ದಾರೆ ಎಂದು ತಿಳಿಸಿದರು.
ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ವೈಪರಿತ್ಯಗಳು ಈ ಬಾರಿಯ ಚರ್ಚೆಯ ಮುಖ್ಯ ಅಂಶಗಳಾಗಿದ್ದವು. ಕರ್ನಾಟಕವು ಈ ಬಾರಿಯೂ ದೊಡ್ಡಮಟ್ಟದ ಬಂಡಾವಳವನ್ನು ಆಕರ್ಷಿಸಿದೆ.