ಬೆಳಗಾವಿ: ವಾಯುವ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ್ ಸಂಕ್ ಮತ್ತು ಶಿಕ್ಷಕರು ಪ್ರತಿನಿಧಿಯಾಗಿರುವ ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ವ್ಯಕ್ತಪಡಿಸಿದರು.
ಬೆಳಗಾವಿ ನಗರದ ಮರಾಠಾ ಸಭಾಂಗಣದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇದೊಂದು ಅತ್ಯಂತ ಸೂಕ್ಷ್ಮ, ಬುದ್ಧಿವಂತರ ಚುನಾವಣೆಯಾಗಿದೆ. ಸ್ವತಂತ್ರ ಸಿಕ್ಕ ನಂತರ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯಲು, ಅಭಿವೃದ್ಧಿ ಕಾಣಲು ಕಾಂಗ್ರೆಸ್ ಸರ್ಕಾರ ರೂಪಿಸಿದ ಶಿಕ್ಷಣ ನೀತಿಗೆ ಕಾರಣವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡುವುದರ ಜೊತೆಗೆ ಕ್ರಾಂತಿಯನ್ನು ಮಾಡಿದೆ. ಸದ್ಯ ದೇಶ ಶಿಕ್ಷಣ ಕ್ಷೇತ್ರದಲ್ಲಿ ಇಷ್ಟೊಂದು ಮುಂದುವರೆಯಲು ಕಾಂಗ್ರೆಸ್ ಪಕ್ಷದ ನೀತಿ ಕಾರಣ ಎಂದರು.
ಎಲ್ಲ ಕ್ಷೇತ್ರದಲ್ಲೂ ಅಪರಾ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಕರು ಕ್ಷೇತ್ರದ ಅಭ್ಯರ್ಥಿ ಆಗಿರುವ ಪ್ರಕಾಶ್ ಹುಕ್ಕೇರಿ ಆಯ್ಕೆ ಮಾಡಲಾಗಿದ್ದು, ಅವರ ಅನುಭವದ ಉಪಯೋಗ ಮಾಡಿಕೊಳ್ಳಬೇಕಿದೆ. ಬೆಳಗಾವಿಯಲ್ಲಿ ಭೀಮ್ಸ್ ಕಾಲೇಜು ಸ್ಥಾಪನೆ ಸೇರಿದಂತೆ ಪ್ರಕಾಶ್ ಹುಕ್ಕೇರಿ ಜಿಲ್ಲೆಗೆ ಕೊಡುಗೆ ನೀಡಿದ್ದಾರೆ. ಅವರು ಮಾಡಿದ ಕೆಲಸಗಳು ನಮಗೆ ಆದರ್ಶವಾಗಿವೆ ಎಂದು ತಿಳಿಸಿದರು.