ಗದಗ: ಜಿಲ್ಲೆಯ ರೋಣ ತಾಲೂಕಿನ ಬೆಣ್ಣೆ ಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ.
ಯಾಸ ಹಡಗಲಿ ಗ್ರಾಮದ ಯಲ್ಲಪ್ಪ ರಾಘವಪುರ, ಅರುಣ್ ವಾಲ್ಮೀಕಿ, ಪರಶುರಾಮ ಮುತ್ತಣ್ಣವರ್ ಮತ್ತು ಗವಿಸಿದ್ದ ಕಲ್ಲಿ ಕಾರ್ಮಿಕರು ಪ್ರವಾಹದಲ್ಲಿ ಸಿಲುಕಿದ್ದರು. ಯಾಸ ಹಡಗಲಿ ಹಾಗೂ ಯಾವಗಲ್ ಸಂಪರ್ಕ ಕಲ್ಪಿಸುವ ಬೆಣ್ಣೆಹಳ್ಳ ಸೇತುವೆ ಕಾರ್ಯಭರದಿಂದ ಸಾಗಿತ್ತು. ಮಳೆಗಾಲ ಆರಂಭವಾದ್ದರಿಂದ ‘ಡೇ ಆಂಡ್ ನೈಟ್’ ಕೆಲಸ ಶುರುವಾಗಿತ್ತು.
ಕೆಲಸ ಮಾಡ್ತಿದ್ದಂತಹ ಸಂದರ್ಭದಲ್ಲಿ ರಾತ್ರಿ 3 ಗಂಟೆ ವೇಳೆಗೆ ಏಕಾಏಕಿ ಪ್ರವಾಹ ಬಂದಿದೆ. ಮೂರು ದಿನಗಳ ಕಾಲ ನಿರಂತರವಾಗಿ ಮಳೆ ಸುರಿಯುತ್ತಿದ್ದರೂ, ಬೆಣ್ಣೆಹಳ್ಳದಲ್ಲಿ ನೀರಿನ ಹರಿವು ಸಾಮಾನ್ಯವಾಗಿತ್ತು. ರಾತ್ರಿ ಕ್ಷಣ-ಕ್ಷಣಕ್ಕೂ ನೀರಿನ ಹರಿವು ಹೆಚ್ಚಾಗಿದೆ. ನೋಡನೋಡುತ್ತಿದ್ದಂತೆ ನೀರಿನ ಪ್ರಮಾಣ ಹೆಚ್ಚಾಗಿ ಸೇತುವೆ ಜಲಾವೃತವಾಗಿದೆ.
ದಿಕ್ಕು ತೋಚದೆ ನಡುಗಡ್ಡೆಯಲ್ಲಿ ನಾಲ್ವರು ಸಿಲುಕಿದ್ದಾರೆ. ನಂತರ ರೋಣ ತಹಶೀಲ್ದಾರ್ ಹಾಗೂ ಅಗ್ನಿ ಶಾಮಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣೆಗೆ ಮುಂದಾದರು. ಪ್ರವಾಹದಲ್ಲಿ ಸಿಲುಕಿದ್ದವರನ್ನು ಲೈಫ್ ಜಾಕೆಟ್ ಹಾಗೂ ಹಗ್ಗದ ಮೂಲಕ ರಕ್ಷಿಸಲಾಗಿದೆ. ಈಗ ಕಾರ್ಮಿಕರು ನೀರಿನಿಂದ ಹೊರಬಂದು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.