ಬಿಪಿಎಲ್ ಇರಲಿ ಯಾವುದೇ ಕಾರ್ಡ್ ಇದ್ರೂ ಸರ್ಕಾರ ಪರಿಹಾರ ಕೊಡ್ಬೇಕು: ಸಿದ್ದರಾಮಯ್ಯ
ಕಲಬುರಗಿ: ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಪರಿಹಾರ ಕೊಡುತ್ತಿದೆ. ಬಿಪಿಎಲ್ ಇರಲಿ ಯಾವುದೇ ಕಾರ್ಡ್ ಇದ್ದರೂ ಪರಿಹಾರ ಕೊಡಬೇಕು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಅವಾಂತರ ಹಿನ್ನೆಲೆ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕಾಲುವೆ ಸರಿಯಾಗಿ ನಿರ್ವಹಣೆ ಮಾಡಬೇಕು. ಅದೇ ನೀರು ರಸ್ತೆ ಮನೆಗಳಿಗೆ ನುಗ್ಗುತ್ತಿದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ರಾಜಕಾಲುವೆ ಸ್ವಚ್ಛತೆ ಮಾಡಬೇಕಿತ್ತು. ಆದರೆ ಸರ್ಕಾರ ಆಗ ಮಲಗಿ ಈಗ ಜನರು ಸಂಕಷ್ಟದರುವ ವೇಳೆ ಪರಿಹಾರ ಕೊಡುವುದಾಗಿ ಹೇಳುತ್ತಿದ್ದಾರೆ. ಈಗ 1,500 ಕೋಟಿ ಹಣ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಸರ್ಕಾರ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಪರಿಹಾರ ಕೊಡುತ್ತಿದೆ. ಬಿಪಿಎಲ್ ಇರಲಿ ಯಾವುದೇ ಕಾರ್ಡ್ ಇದ್ದರೂ ಪರಿಹಾರ ಕೊಡಬೇಕು. ರಾಜಕಾಲುವೆ ಒತ್ತುವರಿಯಾಗಿದ್ದು, ಅನೇಕ ಕಡೆ ಅದರ ಮೇಲೆ ಮನೆ ಕಟ್ಟಿದ್ದಾರೆ. ಅದನ್ನು ಸರ್ಕಾರ ಪರಿಶೀಲನೆ ಮಾಡುತ್ತಿಲ್ಲ. ಬಿಎಸ್ವೈ ಅವರು ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರು ಚಿತ್ರಣ ಬದಲು ಮಾಡುತ್ತೇನೆ ಅಂದಿದ್ದರು, ಆದರೆ ಈಗ ಚಿತ್ರಣವೇ ಕೆಟ್ಟಿದ್ದು, ರಸ್ತೆಗಳೆಲ್ಲ ತಗ್ಗು ಗುಂಡಿಗಳಾಗಿದ್ದಾವೆ. ಓಲ್ಡ್ ಬೆಂಗಳೂರು ಸಿಟಿಯಲ್ಲಿ ಚಿಕ್ಕ ನಾಲೆಗಳಿವೆ. ಹೀಗಾಗಿ ನೀರು ರಸ್ತೆಗೆ ಬರುತ್ತವೆ. ಈ ಕಾಮಗಾರಿಗಾಗಿ ನಾನು 1,700 ಕೋಟಿ ರೂ. ಹಣ ನೀಡಿದೆ. ಆದರೆ ಇವರು ಅಧಿಕಾರಕ್ಕೆ ಬಂದ ಮೇಲೆ ಹಣವೇ ನೀಡಿಲ್ಲ ಎಂದು ಆರೋಪಿಸಿದ್ದಾರೆ.