ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ‘ಒಎಂಆರ್’ ತಿದ್ದಿ ಅಕ್ರಮ ಎಸಗಿರುವ ಸಂಶಯ ವ್ಯಕ್ತವಾಗಿದ್ದು, ಈ ಬಗ್ಗೆ ಕೆಲವು ಮಾಹಿತಿ ಕೋರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಸಿಸಿಬಿ ಪೊಲೀಸರು ಪತ್ರ ಬರೆದಿದ್ದಾರೆ.
ಇಬ್ಬರ ಮೇಲೆ ಅನುಮಾನ: ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಬರೆದಿದ್ದ ಇಬ್ಬರು ಅಭ್ಯರ್ಥಿಗಳ ಒಎಂಆರ್ ಪ್ರತಿಯಲ್ಲಿ ವ್ಯತ್ಯಾಸ ಇರುವ ಮಾಹಿತಿ ಇದೆ. ಆ ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ನೀಡುವಂತೆ ಕೆಇಎ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.
ಅಭ್ಯರ್ಥಿಗಳ ಕಾರ್ಬನ್ ಪ್ರತಿಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಕೆಇಎ ಕಡೆಯಿಂದ ಅಸಲಿ ಪ್ರತಿಗಳು ಸಿಕ್ಕ ಬಳಿಕ ಪರಸ್ಪರ ಹೋಲಿಕೆ ಮಾಡಲಾಗುವುದು. ಮೇಲ್ನೋಟಕ್ಕೆ ವ್ಯತ್ಯಾಸಗಳು ಕಂಡುಬಂದರೆ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಪಡೆಯಲಾಗುವುದು. ನಂತರವೇ ಅಭ್ಯರ್ಥಿಗಳು ಹಾಗೂ ಅವರಿಗೆ ಸಹಕಾರನೀಡಿದವರ ವಿರುದ್ಧ ಕಾನೂನು ಕ್ರಮಜರುಗಿಸಲಾಗುವುದು’ ಎಂದೂ ಹೇಳಿದರು.
ಒಎಂಆರ್ ತಿದ್ದಿರುವ ಶಂಕೆ: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ತಿದ್ದಿ ಅಕ್ರಮ ಎಸಗಿದ್ದ ಸಂಗತಿಯನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ಬಯಲುಮಾಡಿದ್ದಾರೆ. ಅದೇ ಮಾದರಿಯಲ್ಲೇ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಒಎಂಆರ್ ತಿದ್ದಿರುವ ಬಗ್ಗೆ ಸಿಸಿಬಿಪೊಲೀಸರಿಗೆ ಸಂದೇಹ ಉಂಟಾಗಿದೆ.
‘ಪರೀಕ್ಷೆ ಕೊಠಡಿಯಲ್ಲಿ ಕೆಲ ಪ್ರಶ್ನೆಗಳಿಗೆ ಮಾತ್ರ ಉತ್ತರ ಬರೆದು, ಇನ್ನುಳಿದ ವೃತ್ತಗಳನ್ನು ಅಭ್ಯರ್ಥಿಗಳು ಖಾಲಿ ಬಿಟ್ಟಿರುವ ಅನುಮಾನವಿದೆ. ಖಾಲಿ ವೃತ್ತಗಳನ್ನು ಭರ್ತಿ ಮಾಡಿ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲು ಸಂಚು ರೂಪಿಸಿರುವ ಶಂಕೆಯೂ ಇದೆ’ ಎಂದೂ ಅಧಿಕಾರಿಯೊಬ್ಬರು ತಿಳಿಸಿದರು.