ಬೆಂಗಳೂರು: ಮಂಗಳವಾರ ರಾತ್ರಿ ಸುರಿದ ಮಹಾಮಳೆಗೆ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ತತ್ತರಿಸಿದೆ. ಬುಧವಾರವೂ ಅಬ್ಬರಿಸಿದ ವರುಣ, ಇಂದು ಬೆಳ್ಳಂಬೆಳಗ್ಗೆಯೂ ಅಬ್ಬರಿಸುತ್ತಿದ್ದು, ಜನಜೀವನ ಮೂರಾಬಟ್ಟೆಯಾಗಿದೆ. ಸಾವಿರಾರು ಮನೆಗಳಿಗೆ ಮಳೆ ನೀರಿನ ಜತೆಗೆ ಕೊಳಚೆ ನೀರೂ ನುಗ್ಗಿದೆ, ತಗ್ಗುಪ್ರದೇಶದಲ್ಲಿ ರಸ್ತೆಗಳು ಜಲಾವೃತಗೊಂಡಿದೆ.
ಮಳೆ ಹಾನಿ ವೀಕ್ಷಿಸಲು ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಇಂದು ಬೆಳಗ್ಗೆ ಸಿಟಿ ರೌಂಡ್ಸ್ ಮಾಡುತ್ತಿದ್ದಾರೆ.
ಸಿಎಂ ನಿವಾಸದಿಂದ ಅಧಿಕಾರಿಗಳ ಜತೆ ವೋಲ್ವೋ ಬಸ್ ಹತ್ತಿದ ಬೊಮ್ಮಾಯಿ ಅವರು ಮಹಾಲಕ್ಷ್ಮೀ ಲೇಔಟ್ ತೆರಳಿದರು. ಮಹಾಲಕ್ಷ್ಮಿ ಲೇಔಟ್, ಜೆಸಿ ನಗರ 60 ಅಡಿ ರಸ್ತೆಗೆ ಸಿಎಂ ಭೇಟಿ ನೀಡಿದರು. ಈ ವೇಳೆ ಸಚಿವರಾದ ಗೋಪಾಲಯ್ಯ, ಆರ್. ಅಶೋಕ್, ಸೋಮಣ್ಣ ಸಾಥ್ ನೀಡಿದರು. ರಾಜಕಾಲುವೆ ಅತಿಕ್ರಮಣವಾಗಿ ಮನೆಯೊಳಗೆ ನೀರು ನುಗ್ಗಿದೆ. ಅಂತಹ ಮನೆಗಳನ್ನು ಸಿಎಂ ಪರಿಶೀಲಿಸಿದರು. ಕಮಲಾನಗರ ಮುಖ್ಯ ರಸ್ತೆಯತ್ತ ಹೊರಟಿದ್ದಾರೆ. ಒಂದು ಕಡೆ ಮಳೆ, ಮತ್ತೊಂದು ಕಡೆ ಸಿಎಂ ಸಿಟಿ ರೌಂಡ್ಸ್ ಪರಿಣಾಮ ಟ್ರಾಫಿಕ್ ಜಾಮ್ ಹೆಚ್ಚಾಗಿದೆ.