ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪ್ರಕಟವಾಗಿದ್ದು, ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಸಹನಾ ಮಹಾಂತೇಶ ರಾಯರ, ಕನ್ನಡ ವಿಭಾಗದಲ್ಲಿ ಪೂರ್ಣ ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಸಂತಸ ಹಂಚಿಕೊಂಡ ಅವರು, ‘ಕೋವಿಡ್-19 ಸಂಕಷ್ಟದಿಂದ ತರಗತಿ ಸಮರ್ಪಕವಾಗಿ ನಡೆಯಲಿಲ್ಲ. ಆನ್ಲೈನ್ ತರಗತಿಗೆ ಹಾಜರಾಗಲು ನೆಟ್ವರ್ಕ್ ಸಮಸ್ಯೆಯೂ ಕಾಡುತ್ತಲಿತ್ತು. ಆದರೂ, ಸಮಸ್ಯೆಗೆ ಎದೆಗುಂದದೆ ಆತ್ಮವಿಶ್ವಾಸದಿಂದ ಓದು ಮುಂದುವರಿಸಿದೆ. ಶಿಕ್ಷಕರು ಮತ್ತು ಹೆತ್ತವರು ಪ್ರೋತ್ಸಾಹಿಸಿದರು. ಹಾಗಾಗಿ ನಿರೀಕ್ಷೆಯಂತೆ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದರು.
‘9ನೇ ತರಗತಿ ವಾರ್ಷಿಕ ಪರೀಕ್ಷೆ ಮುಗಿಯುತ್ತಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ. ಶಿಕ್ಷಕರ ಪಾಠವನ್ನು ಏಕಾಗ್ರತೆಯಿಂದ ಆಲಿಸುತ್ತಿದ್ದೆ. ನಿತ್ಯ ಮನೆಗೆಲಸ ಮಾಡುತ್ತಲೇ 8 ತಾಸು ಓದುತ್ತಿದ್ದೆ. ಸತತ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ. 625 ಅಂಕ ಸಿಕ್ಕಿರುವುದು ಖುಷಿ ತಂದಿದೆ’ ಎಂದು ಸಂಭ್ರಮಿಸಿದರು