ರಾಜ್ಯ ಬಿಜೆಪಿ ಸರಕಾರ ನಲವತ್ತು ಪರ್ಸೆಂಟ್ ಅವ್ಯವಹಾರ ನಡೆಸುತ್ತಿದೆ ಎನ್ನುವ ಆರೋಪ ಮನೆಮಾತಾಗಲು ಪ್ರಮುಖ ಕಾರಣವಾಗಿದ್ದ ಗುತ್ತಿಗೆದಾರರ ಸಂಘ ಮತ್ತು ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರು ಕಾಂಗ್ರೆಸ್ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.
ರಾಜ್ಯ ಸರಕಾರದ ಇಲಾಖೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ಜಲಸಂಪನ್ಮೂಲ, ಆರೋಗ್ಯ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎಂದು ಕೆಂಪಣ್ಣ ಅವರು ನೇರವಾಗಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದರು.
ಪ್ರಧಾನಿಗೆ ಬರೆದ ಪತ್ರ ಸಾರ್ವಜನಿಕವಾಗುತ್ತಿದ್ದಂತೆಯೇ ವಿರೋಧ ಪಕ್ಷ ಕಾಂಗ್ರೆಸ್ಸಿಗೆ ಇದೊಂದು ಪ್ರಮುಖ ಅಸ್ತ್ರವಾಗಿತ್ತು. ಇದನ್ನು ಬಳಸಿಕೊಂಡು ಸದನದ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಬೆಂಡೆತ್ತಲು ಆರಂಭಿಸಿತ್ತು.
ಗುತ್ತಿಗೆದಾರ ಸಂಘವನ್ನು ಕಾಂಗ್ರೆಸ್ಸಿನವರೇ ಎತ್ತಿಕಟ್ಟುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಈಗ, ಬಿಜೆಪಿ ವಿರುದ್ದ ಟೀಕಾ ಪ್ರಹಾರ ನಡೆಸಲು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಸರಿಯಿಲ್ಲ ಎಂದು ಕಾಂಗ್ರೆಸ್ ಆರೋಪಿಸಿ, ಬಿಜೆಪಿ ಮೂಲೆ ಗೂಬೆ ಕೂರಿಸಿದೆ.
ಬೊಮ್ಮಾಯಿ ಅವರು ಸಂಘದ ಪದಾಧಿಕಾರಿಗಳನ್ನು ಕರೆಸಿ ಮಾತನಾಡಿಸಿದ್ದರು
ಪ್ರಧಾನಿಗೆ ಪತ್ರ ಬರೆದ ನಂತರ ಅವರ ಭೇಟಿಗೆ ಸಮಯಾವಕಾಶವನ್ನು ಸಂಘ ಕೇಳಿತ್ತು. ಆದರೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದಕ್ಕೋ ಏನೋ, ಪ್ರಧಾನಿ ಭೇಟಿಗೆ ಕಾಲಾವಕಾಶ ಕೂಡಿ ಬರಲಿರಲಿಲ್ಲ. ಇದನ್ನೇ ಇಟ್ಟುಕೊಂಡು ಕಾಂಗ್ರೆಸ್ ಬೀದಿಗಿಳಿದಿತ್ತು. ಇನ್ನು, ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮತ್ತೆ ಸರಕಾರದ ಕೆಲವು ಸಚಿವಾಲಯದ ವಿರುದ್ದ ಭ್ರಷ್ಟಾಚಾರದ ಆರೋಪವನ್ನು ಮಾಡುತ್ತಾ ಬರುತ್ತಿದ್ದರು. ಈ ನಡುವೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಘದ ಪದಾಧಿಕಾರಿಗಳನ್ನು ಕರೆಸಿ ಮಾತನಾಡಿಸಿದ್ದರು.
ಸಿಎಂ ಭೇಟಿಯಾಗಿದ್ದ ಸಂಘದ ಅಧ್ಯಕ್ಷ ಕೆಂಪಣ್ಣ
ಏಪ್ರಿಲ್ 25ಕ್ಕೆ ಸಿಎಂ ಭೇಟಿಯಾಗಿದ್ದ ಸಂಘದ ಅಧ್ಯಕ್ಷ ಕೆಂಪಣ್ಣನವರು ಬೊಮ್ಮಾಯಿಯವರ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದರು. “ಮುಖ್ಯಮಂತ್ರಿಗಳನ್ನು ನಮ್ಮನ್ನು ಕರೆಸಿಕೊಂಡು ಉತ್ತಮವಾಗಿ ನಡೆಸಿಕೊಂಡಿದ್ದಾರೆ. ನಮ್ಮೆಲ್ಲಾ ನೋವುಗಳನ್ನು ಹೇಳಿಕೊಂಡಿದ್ದೇವೆ, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದ್ದಾರೆ”ಎಂದು ಕೆಂಪಣ್ಣ ಹೇಳಿದ್ದರು. ಇದರ ನಂತರ, ಸಂಘದಿಂದ ಬಹಿರಂಗ ಆರೋಪ ಸರಕಾರದ ವಿರುದ್ದ ಅಷ್ಟಾಗಿ ಬರುತ್ತಿರಲಿಲ್ಲ. ಈಗ ಅದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.