ಬೆಂಗಳೂರು: ಭ್ರಷ್ಟಾಚಾರ ಮತ್ತು ವಿಳಂಬ ಧೋರಣೆಯಿಂದ ಸರ್ಕಾರದ ವರ್ಚಸ್ಸಿಗೆ ಹಾನಿಯಾಗುತ್ತದೆ. ಯಾವುದೇ ಸಂದರ್ಭದಲ್ಲೂ ಈ ಎರಡನ್ನೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಭಾನುವಾರ ಎಚ್ಚರಿಕೆ ನೀಡಿದರು.
ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಜತೆ ನಾಲ್ಕು ಗಂಟೆಗಳ ಕಾಲ ವಿಡಿಯೊ ಕಾನ್ಫರೆನ್ಸ್ ನಡೆಸಿದ ಅವರು, ಆಡಳಿತದ ವಿವಿಧ ಹಂತದಲ್ಲಿರುವ ಭ್ರಷ್ಟಾಚಾರವನ್ನು ನಿಯಂತ್ರಿಸುವಂತೆ ತಾಕೀತು ಮಾಡಿದರು. ಚುನಾವಣಾ ವರ್ಷವಾಗಿರುವ ಕಾರಣದಿಂದಬಜೆಟ್ ಘೋಷಣೆಗಳನ್ನು ಕಾಲಮಿತಿ ಯೊಳಗೆ ಅನುಷ್ಠಾನಕ್ಕೆ ತರಬೇಕು. ಈ ನಿಟ್ಟಿನಲ್ಲಿ ತಕ್ಷಣದಿಂದಲೇ ಕಾರ್ಯ
ಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ಸಮಯದ ಮಿತಿ ಬೇಡ: ಜಿಲ್ಲಾಧಿ ಕಾರಿಗಳು ನಿಗದಿತ ಅವಧಿಗೆ ಸೀಮಿತವಾಗಿ ಕೆಲಸ ಮಾಡಿದರೆ ಗುರಿ ಸಾಧಿಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಎಲ್ಲರೂ ಹೆಚ್ಚು ಸಮಯವನ್ನು ಕರ್ತವ್ಯಕ್ಕೆ ಮೀಸಲಿಡಬೇಕು. ಎಲ್ಲ ಹಂತಗಳಲ್ಲಿ ಕಡತ ವಿಲೇವಾರಿಗೆ ವೇಗ ನೀಡಬೇಕು. ‘ಅರ್ಜಿ ಸಲ್ಲಿಸಿದರೆ ಕೆಲಸ ಆಗುವುದಿಲ್ಲ’ ಎಂಬ ಮಾತು ಹುಸಿಯಾಗುವಂತೆ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
ವಿವಿಧ ಜಿಲ್ಲೆಗಳಿಂದ 16,436 ಅರ್ಜಿಗಳು ಮುಖ್ಯಮಂತ್ರಿ ಕಚೇರಿಗೆ ಬಂದಿವೆ. ಅವುಗಳಲ್ಲಿ 10,000 ಅರ್ಜಿಗಳನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಕಚೇರಿಯಿಂದ ಬಂದ ಪತ್ರಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಂಡು, ಪ್ರತಿಕ್ರಿಯೆ ಸಲ್ಲಿಸಬೇಕು. ಸಮಸ್ಯೆ ಪರಿಹಾರಕ್ಕೆ ಸ್ಥಳೀಯವಾಗಿಯೇ ಕ್ರಮ ಕೈಗೊಳ್ಳಬೇಕು ಎಂದರು.
ಎಲ್ಲ ಜಿಲ್ಲಾಧಿಕಾರಿಗಳು ವಾರಕ್ಕೊಮ್ಮೆ ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಬೇಕು. ‘ಜಿಲ್ಲಾಧಿಕಾರಿಗಳ ನಡೆ- ಹಳ್ಳಿಯ ಕಡೆ’ ಕಾರ್ಯಕ್ರಮದ ಭಾಗವಾಗಿ ತಿಂಗಳಿಗೊಮ್ಮೆ ಗ್ರಾಮ ವಾಸ್ತವ್ಯ ನಡೆಸುವುದು ಕಡ್ಡಾಯ ಎಂದು ಹೇಳಿದರು.
‘ಗ್ರಾಮ ಒನ್’ ಸೇರಿದಂತೆ ವಿವಿಧ ಸೇವಾ ಕೇಂದ್ರಗಳಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿ ಮೇಲೆ ನಿಗಾ ಇರಿಸಬೇಕು. ‘ಭೂಮಿ’ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು 30 ದಿನಗಳೊಳಗೆ ವಿಲೇವಾರಿ ಮಾಡಬೇಕು ಎಂದರು.