ಬೆಂಗಳೂರು :ಮುಂಗಾರು ಪೂರ್ವ ಕೃಷಿ ಚಟುವಟಿಕೆ ರಾಜ್ಯದಲ್ಲಿ ಬಿರುಸುಗೊಂಡಿರುವ ಬೆನ್ನಲ್ಲೇ ರಸಗೊಬ್ಬರ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ. ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಬೇವು ಲೇಪಿತ ಯೂರಿಯಾವನ್ನು ರೈತರ ಹೆಸರಲ್ಲಿ ಖರೀದಿಸಿ ಹೊರರಾಜ್ಯಗಳಿಗೆ ಮಾರಾಟ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ನೆರೆರಾಜ್ಯಗಳ ಗಡಿ ಚೆಕ್ಪೋಸ್ಟ್ಗಳಲ್ಲಿ ನಿಗಾವಹಿಸಿ ಗೊಬ್ಬರ ಕಳ್ಳಸಾಗಾಟ ದಂಧೆಕೋರರ ವಿರುದ್ಧ ಎಐಆರ್ ದಾಖಲಿಸುವಂತೆ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದೆ.
ಸಬ್ಸಿಡಿ ದರದ ಯೂರಿಯಾವನ್ನು ಮಧ್ಯ ವರ್ತಿಗಳು, ರೈತರು ಹಾಗೂ ರಸಗೊಬ್ಬರ ಮಾರಾಟ ಗಾರರಿಂದ ಪಡೆದು, ವಿವಿಧ ರಾಸಾಯನಿಕಗಳ ಹೆಸರಿನಲ್ಲಿ ಕೇರಳ, ತಮಿಳುನಾಡು ಸೇರಿ ಹೊರರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ಯೂರಿಯಾ ಅಕ್ರಮ ದಾಸ್ತಾನು ಹಾಗೂ ಮಾರಾಟ ನಿಯಂತ್ರಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ ಅವರು ಎಲ್ಲ ಜಿಲ್ಲಾ ಎಸ್ಪಿಗಳಿಗೆ ಲಿಖಿತ ಸೂಚನೆ ನೀಡಿದ್ದಾರೆ. ಬೇವು ಲೇಪಿತ ಯೂರಿಯಾ 45 ಕೆ.ಜಿ ಚೀಲಕ್ಕೆ ಮಾರುಕಟ್ಟೆ ಬೆಲೆ 1666 ರೂ. ಇದೆ. ರಿಯಾಯಿತಿ ದರದಲ್ಲಿ 266 ರೂ.ಗೆ ರೈತರಿಗೆ ನೀಡಲಾಗುತ್ತಿದೆ. ಉಳಿದ 1400 ರೂ. ಅನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ. ಆದರೆ, ರೈತರ ಹೆಸರಲ್ಲಿ ಆಧಾರ್ ಕಾರ್ಡ್ಗಳನ್ನು ಕೊಟ್ಟು ಯೂರಿಯಾ ಖರೀದಿಸುತ್ತಿರುವ ದಂಧೆಕೋರರು, ಹೊರರಾಜ್ಯಗಳಿಗೆ ಸಾಗಾಟ ಮಾಡಿ, ಬೇರೆಬೇರೆ ರಾಸಾಯನಿಕಗಳ ಹೆಸರಲ್ಲಿ ಹೆಚ್ಚಿನ ಬೆಲೆಗೆ ಅಂದಾಜು 2500 ರೂ.ನಿಂದ 3000 ರೂ.ಗೆ ಮಾರಾಟ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಈಗಾಗಲೇ ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಗೊಬ್ಬರ ಅಕ್ರಮ ಸಾಗಾಟ ಪ್ರಕರಣಗಳು ಬೆಳಕಿಗೆ ಬಂದಿದ್ದು, ಐಪಿಸಿ ಸೆನ್ 420ರ ಅಡಿಯಲ್ಲಿ ಎಐಆರ್ಗಳು ದಾಖಲಾಗಿವೆ. ನೇಪಾಳ ಹಾಗೂ ಬಾಂಗ್ಲಾದೇಶಕ್ಕೂ ಕಳ್ಳಸಾಗಣೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ.