ಹಾಸನ, ಮೇ 5: ಚೆನ್ನಾಗಿದ್ದ ತಾಲೂಕು ಕಚೇರಿ ಕಟ್ಟಡವನ್ನು ರಾತ್ರೋರಾತ್ರಿ ಒಡೆದಂತೆ ಡಿಸಿ ಕಚೇರಿಯನ್ನೂ ಒಡೆದರೆ ಪರಿಣಾಮ ಬೇರೆಯಾಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಕೆ ನೀಡಿದರು.
ಹಾಸನದಲ್ಲಿ ಮಾತಾನಾಡಿದ ಅವರು, ಅಧಿಕಾರ ಇದೆ ಎಂದು ದರ್ಪ ನಡೆಸೋದು ಸರಿಯಲ್ಲ.
ಹಾಸನ ಜಿಲ್ಲಾಧಿಕಾರಿ ಅನ್ ಫಿಟ್ ಆಗಿದ್ದಾರೆ. ಅವರು ರಬ್ಬರ್ ಸ್ಟಾಂಪ್ ಇದ್ದಂತೆ. ರಾತ್ರೋರಾತ್ರಿ ಕಟ್ಟಡ ಹೊಡೆಯಲು ಅವರನ್ನು ಇಟ್ಟುಕೊಂಡಿದ್ದಾರೆ. ಡಿಸಿ ಎಷ್ಟು ದಿನ ಆಟ ಆಡುತ್ತಾರೆ ನಾನೂ ನೋಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಕ್ಷೇತ್ರದ 2 ಹೊಬಳಿ ಹಾಗೂ ಸಕಲೇಶಪುರ ಕ್ಷೇತ್ರದ ಒಂದು ಹೋಬಳಿ ಹಾಸನ ತಾಲೂಕಿಗೆ ಸೇರುತ್ತದೆ. ಶಾಸಕರ ಕೇಳದೆ ತಹಸೀಲ್ದಾರ್ ಕಟ್ಟಡ ಒಡೆದಿದ್ದಾರೆ. ಇದಕ್ಕೆ ಅವಕಾಶ ನೀಡಿದ ಡಿಸಿ ಅವರನ್ನು ಜಿಲ್ಲಾಧಿಕಾರಿ ಎಂದು ಕರೆಯಲು ನಾಚಿಕೆಯಾಗುತ್ತೆ. ಡಿಸಿ ವಿರುದ್ಧ ರಾಜ್ಯಪಾಲರಿಗೆ, ಸಿಎಂಗೆ ಪತ್ರ ಬರೆದಿದ್ದೇನೆ ಎಂದು ಎಚ್.ಡಿ. ರೇವಣ್ಣ ಕಿಡಿಕಾರಿದರು.