ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣ ಹಾಗೂ ಮುಂಡರಗಿ ಶ್ರೀ ಅನ್ನದಾನೀಶ್ವರ ಮಠದಲ್ಲಿ ವಿಭಿನ್ನವಾಗಿ ರಂಜಾನ್ ಹಾಗೂ 889ನೇ ಬಸವ ಜಯಂತಿ ಆಚರಿಸಲಾಯಿತು.
ಗಜೇಂದ್ರಗಡ, ಸೂಡಿಯ ಮೈಸೂರು ಮಠದ ಶ್ರೀ ವಿಜಯ ಮಹಾಂತೇಶ್ವರ ಸ್ವಾಮೀಜಿ ಹಾಗೂ ಮೌಲ್ವಿ ನೇತೃತ್ವದಲ್ಲಿ ʻಭಾವೈಕ್ಯತೆ ನಡಿಗೆ ಸಾಮರಸ್ಯದ ಕಡೆಗೆʼ ಎಂಬ ವಿಭಿನ್ನ ಹಾಗೂ ವಿಶೇಷವಾದ ಪಾದಯಾತ್ರೆ ಮಾಡಲಾಯಿತು. ಈ ವೇಳೆ ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ಮಾಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಮರಸ್ಯ ಬಿಂಬಿಸುವ ಪಾದಯಾತ್ರೆ ನಡೆಯಿತು. ಈ ಮೆರವಣಿಗೆಯಲ್ಲಿ ವಿಶ್ವ ಗುರು ಬಸವಣ್ಣ, ಪ್ರವಾದಿ ಮಹಮ್ಮದ್ ಪೈಗಂಬರ್ಗೆ ಜಯಘೋಷ ಕೂಗಿದರು
ಧರ್ಮ ದೊಡ್ಡದಲ್ಲ ದಯೆ ದೊಡ್ಡದು, ಜಾತಿಗಿಂತ ನೀತಿ ಮೇಲು, ಮಾನವ ಜನ್ಮಕ್ಕೆ ಜಯವಾಗಲಿ, ದೇವನೊಬ್ಬ ನಾಮ ಹಲವು ಎಂಬ ಘೋಷವಾಕ್ಯದೊಂದಿಗೆ ಹಿಂದೂ-ಮುಸ್ಲಿಂ ನಾವೆಲ್ಲಾ ಒಂದು ಎಂಬ ಸಂದೇಶ ಸಾರಿದರು. ನಂತರ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು. ಈ ವೇಳೆ ವಿಜಯ ಮಹಾಂತೇಶ್ವರ ಶ್ರೀಗಳು, ಜಗತ್ತಿನಲ್ಲಿ ಶಾಂತಿ ಸಿಗಬೇಕು ಅಂದರೆ ಎಲ್ಲರೂ ಭಾವೈಕ್ಯತೆಯಿಂದ ನಡೆದುಕೊಳ್ಳಬೇಕು. ಇಂತಹ ಭಾವೈಕ್ಯ ಕಾರ್ಯಗಳಲ್ಲಿ ರಾಜಕೀಯ ವ್ಯಕ್ತಿಗಳು ಬೆರೆಯಬೇಕು. ಈಗ ರಾಜಕೀಯ ವ್ಯಕ್ತಿಗಳಲ್ಲಿ ಸಮಾಧಾನ ಶಾಂತಿ ಇಲ್ಲ. ಬರೀ ಪಾರ್ಟಿ, ಪಕ್ಷ ನೋಡ್ತಾರೆ. ಸಮಾಜ, ನಾಡಿನ ಜನತೆಯನ್ನು ನೋಡ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು